ಕೊಪ್ಪಳ: ಪಿಯುಸಿ ವಿದ್ಯಾರ್ಥಿಗಳಿಗೆ ತಾಲ್ಲೂಕಿನ ಕೋಳೂರು ಹಾಗೂ ಕಾಟ್ರಳ್ಳಿ ಮಾರ್ಗದಲ್ಲಿ 5,000 ಸಾಮರ್ಥ್ಯದ ಬಾಲಕ ಹಾಗೂ ಬಾಲಕಿಯರ ಕಾಲೇಜು ಮತ್ತು ವಸತಿ ನಿಲಯ ಆರಂಭಿಸಲಾಗುವುದು ಎಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಘೋಷಿಸಿದರು.
‘ಹೊಸ ಹಾಸ್ಟೆಲ್ ಹಾಗೂ ಕಾಲೇಜಿನ ಕ್ಯಾಂಪಸ್ 38 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಕ್ರೀಡಾಂಗಣ ಸೌಲಭ್ಯವಿರುತ್ತದೆ. 2,500 ಮಕ್ಕಳು ಏಕಕಾಲಕ್ಕೆ ಕುಳಿತು ಊಟ ಮಾಡಲು ಅವಕಾಶವಿರುವ ಊಟದ ಕೊಠಡಿ ನಿರ್ಮಿಸಲಾಗುವುದು’ ಎಂದರು.
‘ಮಠದ ಮುಂಭಾಗದಲ್ಲಿದ್ದ ಮೂರು ಸಾವಿರ ಸಾಮರ್ಥ್ಯದ ಹಾಸ್ಟೆಲ್ ಮೇಲ್ದರ್ಜೆಗೆ ಏರಿಸಿ ಐದು ಸಾವಿರ ಮಕ್ಕಳ ಸಾಮರ್ಥ್ಯದ ಹಾಸ್ಟೆಲ್ ಕಟ್ಟಲು ನಿರ್ಮಿಸಲು ಉದ್ದೇಶಿಸಿದಾಗ ಭಕ್ತರು ಸಾಕಷ್ಟು ದಾನ ಕೊಟ್ಟಿದ್ದಾರೆ. ಅಲ್ಲಿ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಾಲ್ಕು ಸಾವಿರ ಮಕ್ಕಳ ಸಾಮರ್ಥ್ಗದ ಹಾಸ್ಟೆಲ್ ನಿರ್ಮಿಸಲಾಗುವುದು’ ಎಂದು ತಿಳಿಸಿದರು.