ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಶಾಸಕ ಜಿ.ಜನಾರ್ದನರೆಡ್ಡಿ ಅವರು ಆನೆಗೊಂದಿ ಗ್ರಾಮಸ್ಥರ ಜೊತೆ ಉತ್ಸವ ಆಚರಣೆ ಕುರಿತು ಸಭೆ ನಡೆಸಿದರು.
ಬಳಿಕ ಮಾತನಾಡಿದ ಜನಾರ್ದನರೆಡ್ಡಿ, ವಿಜಯನಗರ ಇತಿಹಾಸ ಸಾರುವ ಆನೆಗೊಂದಿ ಉತ್ಸವ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು, ಆನೆಗೊಂದಿ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರ ಸಹಕಾರ ತುಂಬಾ ಬೇಕಾಗಿದೆ. ಈಗಾಗಲೇ ಕಾರ್ಯಕ್ರಮದ ರೂಪುರೇೆಷೆ ಸಿದ್ಧಪಡಿಸಿದ್ದು, ಸ್ಥಳೀಯರ ಸಲಹೆಗಳು ಬೇಕಾಗಿವೆ ಎಂದರು.
ಆನೆಗೊಂದಿ ಗ್ರಾ.ಪಂ ಸದಸ್ಯ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಆನೆಗೊಂದಿ ಉತ್ಸವ ಅಧಿಕಾರಿಗಳ ಉತ್ಸವವಾಗದೇ, ಜನರ ಉತ್ಸವವಾಗಬೇಕು. ಆನೆಗೊಂದಿ ಉತ್ಸವದ ಎರಡನೇ ವೇದಿಕೆ ಸರ್ಕಾರಿ ಶಾಲೆಯಲ್ಲಿ ನಿರ್ಮಿಸುವ ಬದಲಾಗಿ ಗಗನಮಹಲ್ ಬಳಿ ನಿರ್ಮಿಸಬೇಕು. ಉತ್ಸವ ಸಿದ್ದತೆಗಾಗಿ ರಚಿಸುವ ಸಮಿತಿಗಳು ಕೇವಲ ಅಧಿಕಾರಿಗಳಿಗೆ ಸೀಮಿತವಾಗದೇ, ಸ್ಥಳೀಯರನ್ನು ಸೇರಿಸಿಕೊಂಡು ಕೆಲಸ ಮಾಡಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು‘ ಎಂದರು.
ನಂತರ ಶಾಸಕರು ಸ್ಥಳೀಯರ ಸಲಹೆಗಳಿಗೆ ಸಮ್ಮಿತಿ ನೀಡಿದರು.
ಉತ್ಸವ ಮೈದಾನ ವೀಕ್ಷಣೆ: ಆನೆಗೊಂದಿ ಉತ್ಸವ ಪೂರ್ವ ಸಿದ್ದತೆ ಭಾಗವಾಗಿ ಆನೆಗೊಂದಿ ಗ್ರಾಮದಲ್ಲಿ ಪ್ರತಿಬಾರಿ ಮಾಡುವ ಉತ್ಸವ ಮೈದಾನಕ್ಕೆ ಶಾಸಕ ಜಿ.ಜನಾರ್ದನರೆಡ್ಡಿ ಭಾನುವಾರ ಭೇಟಿ ಪರಿಶೀಲಿಸಿದರು.
ನಂತರ ಮಾತನಾಡಿ, ಆನೆಗೊಂದಿ ಮೈದಾನದಲ್ಲಿ ಮುಖ್ಯ ವೇದಿಕೆ ನಿರ್ಮಾಣ ಮಾಡಲು ಈಗಾಗಲೇ ಬೆಂಗಳೂರು ಮೂಲದ ಏಜೆನ್ಸಿಗೆ ನೀಡಲಾಗಿದೆ. ಇನ್ನೂ ಗೋಷ್ಠಿ, ವಿಚಾರ ಸಂಕಿರಣ,, ಸಣ್ಣ,ಪುಟ್ಟ ಕಾರ್ಯಕ್ರಮಗಳನ್ನು ನಡೆಸಲು ಆನೆಗೊಂದಿ ಗ್ರಾಮದ ಒಳಗಡೆ ಇನ್ನೊಂದು ವೇದಿಕೆ ಸಿದ್ಧಪಡಿಸಲಾಗುತ್ತದೆ. ಉತ್ಸವ ಎರಡು ದಿನಗಳ ಕಾಲ ನಡೆಯಲಿದ್ದು, ಉತ್ಸವಕ್ಕೆ ಬರುವ ಎಲ್ಲ ಜನತೆಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ.ಈಗಾಗಲೇ ಉತ್ಸವದ ಮೊದಲನೇ ಹಂತದ ಸಿದ್ಧತೆಗಳು ಆರಂಭವಾಗಿವೆ. ಶೀಘ್ರವಾಗಿ ಉತ್ಸವದ ಅಮಂತ್ರಣ ಪತ್ರಿಕೆಗಳನ್ನು ಗಣ್ಯರಿಗೆ ನೀಡಲಾಗುತ್ತದೆ ಎಂದರು.
ಕೆಆರ್ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು, ರಾಜೇಶ್ವರಿ, ಯಮನೂರ ಚೌಡ್ಕಿ, ರಮೇಶ ಹೊಸಮನಿ, ಮಂಜುನಾಥ ಕಲಾಲ್ ಸೇರಿ ಆನೆಗೊಂದಿ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.