ಗಂಗಾವತಿ: ಆನೆಗೊಂದಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಚಿಕ್ಕಜಂತಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರ ಎಂದು ಮರುನಾಮಕರಣ ಮಾಡಿದ್ದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಉಪತಹಶೀಲ್ದಾರ್ ವಿ.ಎಚ್.ಹೊರಪೇಟೆ ಅವರಿಗೆ ಮನವಿ ಸಲ್ಲಿಸಿದರು.
ಕರಕುಶಲ ನಿಗಮದ ಮಾಜಿ ಅಧ್ಯಕ್ಷೆ ಲಲಿತಾರಾಣಿ ಮಾತನಾಡಿ,‘ಐತಿಹಾಸಿಕ ಮಹತ್ವ ಇರುವ ಆನೆಗೊಂದಿ ಗ್ರಾಮವನ್ನು ಜಿ.ಪಂ ಕ್ಷೇತ್ರವನ್ನಾಗಿ ಮಾಡಿ ಒಳ್ಳೆ ಕೆಲಸ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಚುನಾವಣೆ ಆಯೋಗ ಆನೆಗೊಂದಿ ಕ್ಷೇತ್ರ ಬದಲಾವಣೆ ಮಾಡಿದೆ. ಚಿಕ್ಕಜಂತಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರ ಎಂದು ನಾಮಕರಣ ಮಾಡಿದೆ. ಇದನ್ನು ಆನೆಗೊಂದಿ ಗ್ರಾಮಸ್ಥರು ಖಂಡಿಸುತ್ತಿದ್ದೇವೆ. ಚುನಾವಣೆ ಆಯೋಗ ಎಚ್ಚೆತ್ತುಕೊಂಡು ಇದನ್ನು ಕೈಬಿಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಗ್ರಾಮದ ಪ್ರಮುಖರಾದ ಹರಿಹರದೇವರಾಯಲು, ಬುಕ್ಕದೇವರಾಯ, ತಿಮ್ಮಪ್ಪ ಬಾಳೆಕಾಯಿ, ಮಲ್ಲಿಕಾರ್ಜುನ, ವೈರಮೇಶ, ಅಮರೇಶ ಮಲ್ಲಾಪುರ, ಬಸವರಾಜ, ನಾಗರಾಜ, ತಾಳೂರು ಶ್ರೀನಿವಾಸ, ರಜನಿಕಾಂತ ಹಾಗೂ ಪ್ರವೀಣ ಇದ್ದರು.