ಗಂಗಾವತಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸೋಮವಾರ ಕೆಆರ್ಪಿಪಿ ಪದಾಧಿಕಾರಿಗಳು ಅಂಜನಾದ್ರಿ ಸುತ್ತಮುತ್ತ ಸ್ವಚ್ಛತೆ ಕಾರ್ಯ ಕೈಗೊಂಡರು. ಅಂಜನಾದ್ರಿ ಹನುಮಮಾಲಾ ವಿಸರ್ಜನೆ ಅಂಗವಾಗಿ ಸಾವಿರಾರು ಸಂಖ್ಯೆಯ ಭಕ್ತರು ಅಂಜನಾದ್ರಿಗೆ ಆಗಮಿಸಿದ ಕಾರಣ ಅಂಜನಾದ್ರಿ ಸುತ್ತ ಪ್ಲಾಸ್ಟಿಕ್ ಬಾಟಲಿ, ಹಾಳೆ ಸೇರಿ ಕಸ ಸಂಗ್ರಹವಾಗಿತ್ತು.
ಕೆಆರ್ಪಿಪಿ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಒಳ್ಳೆಯ ಕಾರ್ಯ ಮಾಡುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರು ಪ್ಲಾಸ್ಟಿಕ್ ಚೀಲ ಹಿಡಿದು ಕಾರ್ಯಕರ್ತರಿಂದ ಪ್ಲಾಸ್ಟಿಕ್ ಬಾಟಲಿ, ಕಸ ಹಾಕಿಸಿಕೊಂಡು, ಸ್ವಚ್ಛಗೊಳಿಸಿದರು. ಇದಕ್ಕೂ ಮುನ್ನ ಅಂಜನಾದ್ರಿ ಪಾದಗಟ್ಟೆ ಬಳಿಯ ಆಂಜನೇಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ, ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು, ನಿಕಟಪೂರ್ವ ಗ್ರಾಮೀಣ ಅಧ್ಯಕ್ಷ ಡಿ.ಕೆ. ಹಾಗೋಲಿ, ವೀರೇಶ ಬಲಕುಂದಿ, ರಾಜೇಶರೆಡ್ಡಿ ಚನ್ನವೀರಗೌಡ ಕೋರಿ, ಬೆಟ್ಟಪ್ಪ ಬೆಣಕಲ್, ಗಂಗಾಧರ ಸ್ವಾಮಿ ಹಿರೇಮಠ ಪಾಲ್ಗೊಂಡಿದ್ದರು.
ಅಂಜನಾದ್ರಿ: ಮುಂದುವರಿದ ಹನುಮಮಾಲಾ ವಿಸರ್ಜನೆ
ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜ ನಾದ್ರಿ ಬೆಟ್ಟದಲ್ಲಿ ಸೋಮವಾರವು ಸಹ ಹನುಮಮಾಲಾಧಾರಿಗಳು ಅಂಜನಾದ್ರಿ ಬೆಟ್ಟವೇರಿ ಹನುಮನ ದರ್ಶನ ಪಡೆದು ಹನುಮಮಾಲಾ ವಿಸರ್ಜನೆ ಮಾಡಿದರು.
ಭಾನುವಾರ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲಾ ವಿಸರ್ಜನೆ ಮಾಡಲು ಭಕ್ತರು ದಂಡುಗಳಲ್ಲಿ ಆಗಮಿಸಿ, ದರ್ಶನ ಪಡೆದು, ಮಾಲೆ ವಿಸರ್ಜನೆ ಮಾಡಿದ್ದರು. ಭಾನುವಾರ ಮಾಲೆ ವಿಸರ್ಜನೆ ಮಾಡಲು ಆಗದ ಮಾಲಾಧಾರಿಗಳು ಸೋಮವಾರ ಸಂಜೆಯವರೆಗೆ ಅಂಜನಾದ್ರಿಗೆ ಭೇಟಿನೀಡಿ ಮಾಲೆ ವಿಸರ್ಜನೆ ಮಾಡಿದರು.
ಇನ್ನೂ ಕ್ರಿಸ್ಮಸ್ ಹಬ್ಬವಿರುವ ಕಾರಣ ಸರ್ಕಾರ ರಜೆಯಿದ್ದು, ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ ಕುಟುಂಬದ ಸಮೇತ ಭಕ್ತರು ಅಂಜನಾದ್ರಿಬೆಟ್ಟ ಏರಿ ದರ್ಶನ ಪಡೆದ ಸನ್ನಿವೇಶಗಳು ಕಂಡು ಬಂದವು. ಸೋಮವಾರವು ಸಹ ಅಂಜನಾದ್ರಿ ಬೆಟ್ಟದ ಮೇಲೆ ಕೆಳಭಾಗ, ಪಾರ್ಕಿಂಗ್ ಸ್ಥಳಗಳಲ್ಲಿ ಹೋಂ ಗಾರ್ಡ್ ಗಳು ಬಂದೋಬಸ್ತ್ ಮಾಡಿದರು.