ಗಂಗಾವತಿ: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ಅತ್ಯಾಚಾರ ಯತ್ನ ನಡೆದಿರುವ ಘಟನೆ ಖಂಡಿಸಿ, ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ನಗರದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಆಶಾ ಕಾರ್ಯಕರ್ತೆ ಮೀನಾಕ್ಷಿ ಮಾತನಾಡಿ,‘ಮಹಿಳೆಯರ ಆರೋಗ್ಯ ಕಾಪಾಡಲು ದುಡಿಯುತ್ತಿರುವ ಆಶಾ ಕಾರ್ಯಕರ್ತೆಯ ಮೇಲೆ ಕನಕಗಿರಿ ತಾಲ್ಲೂಕಿನ ಬಸರಿಹಾಳ ಗ್ರಾಮದ ವ್ಯಕ್ತಿಯು ಅತ್ಯಾಚಾರ ಯತ್ನ ನಡೆಸಿದ್ದಾನೆ. ಇದು ಸಮಾಜವೇ ತಲೆ ತಗ್ಗಿಸುವಂತ ಘಟನೆ ಆಗಿದೆ. ಒಬ್ಬಂಟಿಯಾಗಿ ಆಶಾ ಕಾರ್ಯಕರ್ತೆಯರು ಸಮಾಜದಲ್ಲಿಯೇ ಸೇವೆಯನ್ನು ಸಲ್ಲಿಸುತ್ತಿದ್ದು, ಅವರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರಾದ ಶಾರದಾ, ರೇಖಾ, ಲಾಲಾಬಿ, ಲಲಿತಾ, ಕೌಶಲ್ಯ, ನೇತ್ರಾವತಿ, ಬಸಮ್ಮ, ಪದ್ಮಾವತಿ, ಲಕ್ಷ್ಮಿ, ದೀಪಾ ಹಾಗೂ ಶರಣಮ್ಮ ಇದ್ದರು.