ಚಿಕ್ಕಮಾದಿನಾಳ (ಕನಕಗಿರಿ): ‘ವಿದ್ಯಾರ್ಥಿಗಳು ಪರೀಕ್ಷೆಗಳ ಕುರಿತು ಭಯಪಡಬಾರದು. ಧೈರ್ಯದಿಂದ ಎದುರಿಸಬೇಕು’ ಎಂದು ಸಂಪನ್ಮೂಲ ವ್ಯಕ್ತಿ ಚನ್ನಪ್ಪ ದಿಂಡೂರು ಸಲಹೆ ನೀಡಿದರು.
ಪಾರ್ವತಮ್ಮ ಬಿ. ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸಮೀಪದ ಚಿಕ್ಕಮಾದಿನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಪರೀಕ್ಷೆ ಒಂದು ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂಗ್ಲಿಷ್, ಗಣಿತ ಸೇರಿ ಯಾವ ವಿಷಯಗಳು ಕಬ್ಬಿಣದ ಕಡಲೆ ಅಲ್ಲ. ಸತತ ಅಧ್ಯಯನ ಹಾಗೂ ಶ್ರಮದಿಂದ ಕಠಿಣ ವಿಷಯಗಳನ್ನು ಕರಗತ ಮಾಡಿಕೊಂಡು ಪರೀಕ್ಷೆಯಲ್ಲಿ ಸುಲಭವಾಗಿ ಉತ್ತರಗಳನ್ನು ಬರೆಯಬಹುದು’ ಎಂದರು.
ಶಾಲೆಯ ಮುಖ್ಯಶಿಕ್ಷಕ ಶಂಕ್ರಪ್ಪ ನಾಯಕ್ ಹಾಗೂ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹುಲಿಗೆಮ್ಮ ಸುಳೇಕಲ್ ಕಾರ್ಯಕ್ರಮ ಉದ್ಘಾಟಿಸಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಯಂಕಪ್ಪ, ಪ್ರಮುಖರಾದ ಶಂಕರಗೌಡ ಪಾಟೀಲ, ಯಂಕಪ್ಪ, ಶಿಕ್ಷಕಿ ಸುಮತಿ ಹಾಗೂ ಶಿಕ್ಷಕಿ ರಾಘವೇಂದ್ರ ರಕ್ಕಸಗಿ ಇದ್ದರು.