ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಂತರ ಕುದುರಿದ ಮಾರುಕಟ್ಟೆ

ಸಾರ್ವಜನಿಕರಿಗೆ ತೋಟಗಾರಿಕೆ ಇಲಾಖೆಯಿಂದಲೇ ಹೂವಿನ ಬೆಳೆಗಾರರ ಮಾಹಿತಿ
Last Updated 16 ನವೆಂಬರ್ 2020, 5:15 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನಂತರ ಜಿಲ್ಲೆಯಾದ್ಯಂತ ಮಾರುಕಟ್ಟೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ದೀಪಾವಳಿಗೆ ಉತ್ಪನ್ನಗಳು ಮಾರಾಟವಾಗುವ ಮೂಲಕರೈತರು ಮಂದಹಾಸ ಬೀರುತ್ತಿದ್ದಾರೆ.

ಹಬ್ಬಕ್ಕೆ ಚೆಂಡು ಹೂವಿಗೆ ವಿಶೇಷ ಬೇಡಿಕೆ ಮತ್ತು ಪೂಜೆಗೆ ಅವಶ್ಯ ಇರುವುದರಿಂದ100ಕ್ವಿಂಟಲ್‌ ಚೆಂಡು ಹೂವುಗಳು ಮಾರಾಟವಾಗಿವೆ. ಈ ಸಾರಿ ಹೂವು ಬೆಳೆಗಾರರ ಪಟ್ಟಿಯನ್ನು ತೋಟಗಾರಿಕೆ ಇಲಾಖೆಯಿಂದಲೇ ಬಿಡುಗಡೆ ಮಾಡಿ, ಅವರ ಮೊಬೈಲ್‌ ನಂಬರ್ ಮೂಲಕ ಸಂಪರ್ಕಿಸುವಂತೆ ವಿವಿಧ ಕಡೆ ದರ ಪಟ್ಟಿ ಸೇರಿದಂತೆ ಬ್ಯಾನರ್‌ ಹಾಕಿದ್ದು ವಿಶೇಷ.

ತೋಟಗಾರಿಕೆ ಪ್ರದೇಶದ ರೈತರು ಸತತ ಮಳೆಯಿಂದ ಕೊಳವೆಬಾವಿಗಳು ಮರುಪೂರಣಗೊಂಡಿದ್ದು, ಅಂತರ್ಜ ವೃದ್ಧಿಯಾಗಿದೆ. ಮಳೆಗೆ ಕೆಲವು ಹೂವಿನ ಬೆಳೆಗಳು ಹಾನಿಯಾದರೂ ನಂತರ ಬಿದ್ದ ಬಿಸಿಲಿನಿಂದ ನಳನಳಿಸುವಂತೆ ಬೆಳೆ ಬಂದಿದೆ. ಹಬ್ಬಕ್ಕೆ ಬರುವಂತೆ ಚೆಂಡು ಹೂವು ಮಾರುಕಟ್ಟೆಗೆ ಬಂದಿದ್ದರಿಂದ ರೈತರು ಮಾರಾಟದಲ್ಲಿ ಮಗ್ನರಾಗಿದ್ದರು.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಗಂಗಾವತಿ, ಕೊಪ್ಪಳ, ಕಾರಟಗಿ, ಕುಷ್ಟಗಿಯಲ್ಲಿ ವ್ಯಾಪಾರ ಜೋರಾಗಿ ನಡೆದಿತ್ತು. ಅಲ್ಲದೆ ಇಲ್ಲಿನ ಉತ್ತಮ ಗುಣಮಟ್ಟದ ಹೂವುಗಳು ಹೊಸಪೇಟೆ, ಗದಗ, ಬಳ್ಳಾರಿ, ಬೆಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು.

ಇಲ್ಲಿನ ಮಣ್ಣು ಬಿಸಿಲಿಗೆ ಉತ್ತಮವಾಗಿ ಬೆಳೆಯುವ ಹೂವುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಮಲ್ಲಿಗೆ, ಕನಕಾಂಬರ, ಶೇವಂತಿಗೆ, ಡೇರೆ, ಗಲಾಟೆ ಹೂವುಗಳನ್ನು ಕುಷ್ಟಗಿ, ಯಲಬುರ್ಗಾ, ಕುಕನೂರು, ಕೊಪ್ಪಳ ತಾಲ್ಲೂಕಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಕೆಲವು ಹೂವು ಬೆಳೆಗಾರರು ದೂರದ ಚೆನೈವರೆಗೆ ವ್ಯಾಪಾರ ವಹಿವಾಟು ಇಟ್ಟುಕೊಂಡಿದ್ದಾರೆ.

ತಮ್ಮ ಮೂರು ಎಕರೆ ಪ್ರದೇಶದಲ್ಲಿ ಹೂವು ಬೆಳೆದ ಯಲಬುರ್ಗಾ ತಾಲ್ಲೂಕಿನ ಕುದರಿಮೋತಿ ಗ್ರಾಮದ ಪ್ರಗತಿಪರ ರೈತ ಸುರೇಶ ಚೌಡ್ಕಿ, ನಾವು ಬೆಳೆದ ಹೂವಿಗೆ ಆರಂಭದಲ್ಲಿಯೇ ಬೇಡಿಕೆಯಿತ್ತು. ಜಮೀನಿಗೆ ಬಂದು ಮುಂಗಡ ಬುಕ್ಕಿಂಗ್‌ ಕೂಡಾ ಮಾಡಿದ್ದರು. ನನಗೆ ಮಾರಾಟಕ್ಕೆ ಬಿಡುವು ಇಲ್ಲದಷ್ಟು ಕೆಲಸವಿತ್ತು. ಹಬ್ಬಕ್ಕೆ ನಮ್ಮ ಜಮೀನಿನ ಎಲ್ಲ ಹೂವುಗಳು ಮಾರಾಟವಾಗಿ ನಿತ್ಯ ಹೂವುಗಳನ್ನು ಕೀಳುವುದೇ ದೊಡ್ಡ ಕೆಲಸವಾಗಿತ್ತು. ಇದಕ್ಕಾಗಿ ದೂರದಿಂದ ಕೃಷಿ ಕೂಲಿಕಾರ್ಮಿಕರನ್ನು ಕರೆದುಕೊಂಡು ಬರಬೇಕಾಯಿತು' ಎಂದು ಹರ್ಷದಿಂದ ಹೇಳುತ್ತಾರೆ.

ಚೆಂಡು ಹೂವಿಗೆ ಕೀಟ ಬಾಧೆಯೂ ಕಡಿಮೆ. ಔಷಧ ಗುಣವಿರುವುದರಿಂದ ಹೊಲದ ಬದುವಿನ ಸುತ್ತಲೂ ಈ ಭಾಗದಲ್ಲಿರೈತರು ಬೆಳೆಯುತ್ತಾರೆ. ಕೆಲವು ರೈತರು ಒಂದೇ ಬಣ್ಣದ ಹೂವುವನ್ನು ಬೆಳೆದಿದ್ದಾರೆ. ಪ್ರತಿ ವರ್ಷ ಲಾಭವಿಲ್ಲದೆ ಕೈಸುಟ್ಟುಕೊಳ್ಳುತ್ತಿದ್ದ ಹೂವು ಬೆಳೆಗಾರರು ಈ ಸಾರಿ ಉತ್ತಮ ಮಳೆಯಿಂದ ಬೆಳೆ ತೆಗೆದಿದ್ದಾರೆ. ಹಬ್ಬದ ಸಂಜೆಯ ದಿನ ಕೆಲವು ಗ್ರಾಮಗಳಲ್ಲಿ ಹೂವುಗಳು ಸಿಗುವುದೇ ಅಪರೂಪವಾಗಿತ್ತು.

ಮಳೆಗೆ ಹಾಳಾಗಿದ್ದ ಬಾಳೆ ತೋಟಕ್ಕೂ ಶುಕ್ರದೆಸೆ ಬಂದಿತ್ತು. ಬಾಳೆ ಗಿಡಗಳು ಜೋಡಿಗೆ ₹ 50ರಂತೆ ಮಾರಾಟವಾದವು. ಚೆಂಡು ಹೂವು ಹಬ್ಬದ ಕೊನೆಯವರೆಗೆ ತನ್ನ ಬೆಲೆಯನ್ನು ಕಳೆದುಕೊಳ್ಳದೆ ಕೆಜಿಗೆ ₹ 150 ರಿಂದ ₹ 200, ಒಂದು ಮಾರಿಗೆ ₹ 100ರಂತೆ ಮಾರಾಟವಾಗಿದ್ದು, ಈ ಸಾರಿಯ ವಿಶೇಷವಾಗಿದೆ.

ತೋಟಗಾರಿಕೆ ಇಲಾಖೆಯಿಂದ ಈ ಸಾರಿ ಆಯ್ದ ತಾಲ್ಲೂಕಿನ ಉತ್ತಮ ಬೆಳೆಗಾರರನ್ನು ಗುರುತಿಸಿ ಪಟ್ಟಿ ಮಾಡಲಾಗಿತ್ತು. ಇದರಿಂದ ಗ್ರಾಹಕರಿಗೂ ಸರಳವಾಗಿ ಮಾಹಿತಿ ದೊರೆಯುವಂತೆ ಆಯಿತು. ದೀಪಾವಳಿ ಜಿಲ್ಲೆಯ ಹೂವು ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟಿದ್ದು, ರೈತರು ವ್ಯಾಪಾರದ ಮೂಲಕ ಮಂದಹಾಸ ಬೀರುವಂತೆ ಆಯಿತು.

‘ಹೂವು ಬೆಳೆಗೆ ಈ ಸಾರಿ ಉತ್ತಮ ವಾತಾವರಣ ಇರುವುದನ್ನು ರೈತರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಇಲಾಖೆಯಿಂದಲೂ ಬೀಜ, ಗೊಬ್ಬರದ ಮಾಹಿತಿ ನೀಡಿದ್ದೇವೆ. ಅಲ್ಲದೆ ಆನ್‌ಲೈನ್ ಮಾರಾಟಕ್ಕೆ ಕೂಡಾ ಅನುಕೂಲ ಕಲ್ಪಿಸಿದ್ದೇವೆ. ಉತ್ತಮ ಮಳೆಯಿಂದ ತೋಟಗಾರಿಕೆ ಬೆಳೆಗಳು ಚೇತರಿಸಿಕೊಂಡಿವೆ. ಅಂತರ್ಜಲ ಮಟ್ಟ ವೃದ್ಧಿಸಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT