ಗಂಗಾವತಿ: ‘ಕೊರೊನಾ ಸೋಂಕಿತರ ಸಂಖ್ಯೆ ಪ್ರತಿನಿತ್ಯ ದ್ವಿಗುಣಗೊಳ್ಳುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು’ ಎಂದು ಆನೆಗೊಂದಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ಹೇಳಿದರು.
ತಾಲ್ಲೂಕಿನ ಆನೆಗೊಂದಿ ಗ್ರಾ.ಪಂ ವ್ಯಾಪ್ತಿಯ ಮಲ್ಲಾಪುರ ಸಮೀಪದ ಡುಂಕಿ ಕೊಳ್ಳ ಕೆರೆಯಲ್ಲಿ ಶುಕ್ರವಾರ ದುಡಿಯೋಣ ಬಾ ಹಾಗೂ ಜಲಶಕ್ತಿ ಅಭಿಯಾನದಡಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಡೆದ ರೋಜಗಾರ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನರೇಗಾದಡಿ ಪುರುಷ ಮತ್ತು ಮಹಿಳೆಗೆ ಸಮಾನ ವೇತನ ನೀಡುತ್ತಿದ್ದು, ನರೇಗಾ ಕೂಲಿಯೂ ₹ 275 ರಿಂದ ₹ 289 ಗೆ ಹೆಚ್ಚಳವಾಗಿದೆಎಂದು ಹೇಳಿದರು.
ನಂತರ ತಾಲ್ಲೂಕು ಐಇಸಿ ಸಂಯೋಜಕ ಶಿವಕುಮಾರ್.ಕೆ ಮಾತನಾಡಿ ದುಡಿಯೋಣಾ ಬಾ ಹಾಗೂ ಜಲಶಕ್ತಿ ಅಭಿಯಾನದ ಕುರಿತು ಕೂಲಿಕಾರರಿಗೆ ಮಾಹಿತಿ ನೀಡಿದರು.
ಕೆಲಸ ಮಾಡುವ ಸ್ಥಳದಲ್ಲಿ ಕೂಲಿಕಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಜಾಗೃತಿ ಮೂಡಿಸಿದರು. ರೇಣುಕಾ ಎಂಬ ಕಾಯಕಬಂಧು 150 ಕ್ಕೂ ಹೆಚ್ಚು ಕೂಲಿಕಾರರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದರು.