ಕೊಪ್ಪಳ: ಎರಡು ದಿನ ಕೊರೊನಾ ಸೋಂಕಿತರು ಇಲ್ಲದೆ ಸಮಾಧಾನ ತಂದಿದ್ದ ಜಿಲ್ಲೆಯ ಜನತೆಗೆ ಗುರುವಾರ 40ಕ್ಕೆ ಏರಿಕೆಯಾಗುವ ಮೂಲಕ ಕಂಗೆಡುವಂತೆ ಮಾಡಿದೆ.
ಗಂಗಾವತಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು 23,ಕೊಪ್ಪಳ ತಾಲ್ಲೂಕಿನಲ್ಲಿ 2, ಕುಷ್ಟಗಿ ತಾಲ್ಲೂಕಿನಲ್ಲಿ 6, ಯಲಬುರ್ಗಾ ತಾಲ್ಲೂಕಿನಲ್ಲಿ 9 ಪ್ರಕರಣ ದೃಢಪಟ್ಟಿವೆ.
ಗಂಗಾವತಿ 9 ವರ್ಷದ ಮಗು ಸೇರಿದಂತೆ 23 ಪುರುಷರು, 17 ಮಹಿಳೆಯರು ಸೋಂಕು ಪೀಡಿತರಾಗಿದ್ದಾರೆ. ಸೋಂಕಿತರನ್ನು ತಳಕಲ್ಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಗಂಭೀರವಾದ ರೋಗಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ವಲಸಿಗರ ಮೇಲೆ ಚೆಕ್ ಪೋಸ್ಟ್ಗಳ ಮೂಲಕ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದರೂ ಪ್ರಕರಣ ಸಂಖ್ಯೆ ಕಡಿಮೆಯಾಗದೇ ಇರುವುದು ದುರಂತ.
'ನಗರದ ಸಿರಸಪ್ಪಯ್ಯನಮಠದ ಹತ್ತಿರದ 40 ವರ್ಷದ ವ್ಯಕ್ತಿ,ನಗರದ ಮಾರುಕಟ್ಟೆ ಪ್ರದೇಶದ 32 ವರ್ಷದ ವ್ಯಕ್ತಿ ಕೋವಿಡ್ಗೆ ಬಲಿಯಾಗಿದ್ದಾರೆ.ಇವರ ಸಾವಿಗೆ ಕೇವಲ ಕೋವಿಡ್–19 ಮಾತ್ರ ಕಾರಣವಲ್ಲ, ಮೃತ ವ್ಯಕ್ತಿಗಳಿಬ್ಬರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ' ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರೆಡ್ಡಿ ತಿಳಿಸಿದ್ದಾರೆ.
ಒಟ್ಟು ಜಿಲ್ಲೆಯಲ್ಲಿ ಇದುವರೆಗೂ 639 ಕೋವಿಡ್–19 ಪತ್ತೆಯಾಗಿದ್ದು, ಇದರಲ್ಲಿ 395 ಜನ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 14 ಜನ ಮೃತಪಟ್ಟಿದ್ದು, 230 ಜನ ವಿವಿಧಡೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ತಿಳಿಸಿದ್ದಾರೆ.