ಕೊಪ್ಪಳ: ‘ಲೋಕಸಭಾ ಚುನಾವಣೆಗೆ ನನಗೆ ಟಿಕೆಟ್ ತಪ್ಪಿದರೂ ರಾಜ್ಯದ ಒಬ್ಬ ನಾಯಕ ಕೂಡ ಸೌಜನ್ಯಕ್ಕೂ ಫೋನ್ ಕರೆ ಮಾಡಲಿಲ್ಲ. ಅವರೆಲ್ಲರೂ ನನ್ನನ್ನು ಗುಜರಿ ರಾಜಕಾರಣಿ ಅಂದುಕೊಂಡಿದ್ದಾರೆಯೇ’ ಎಂದು ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿ ಪ್ರಶ್ನಿಸಿದರು.
ತಾಲ್ಲೂಕಿನ ಗಿಣಿಗೇರಿ ಗ್ರಾಮದಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿ ವರಿಷ್ಠರ ವಿರುದ್ಧ ಗರಂ ಆದ ಅವರು ‘ಟಿಕೆಟ್ ತಪ್ಪಿದರೂ ಯಾಕೆ ಒಬ್ಬರೂ ಕರೆ ಮಾಡಿಲ್ಲ, ಯಾಕೆ ಟಿಕೆಟ್ ತಪ್ಪಿಸಲಾಯಿತು ಹಾಗೂ ಯಾರು ನನಗೆ ಟಿಕೆಟ್ ತಪ್ಪಿಸಿದರು ಎನ್ನುವ ಪ್ರಶ್ನೆಗಳಿಗೆ ಉತ್ತರ ಬೇಕೇ ಬೇಕು. ಉತ್ತರ ಬಂದ ಬಳಿಕವಷ್ಟೇ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುವೆ. ರಾಜಕೀಯವಾಗಿ ನಿವೃತ್ತಿಯಾಗುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿಯೇ ಇರುವೆ. ಮಾಡಬೇಕಾದ ಸಾಕಷ್ಟು ಕೆಲಸಗಳು ಇವೆ’ ಎಂದರು. ಆದರೆ ತಮ್ಮ ಮುಂದಿನ ನಡೆ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.
ಕರೆ: ಟಿಕೆಟ್ ಕೈ ತಪ್ಪಿದ ಬಳಿಕ ಸಂಗಣ್ಣ ಅಸಮಾಧಾನಗೊಂಡ ವಿಷಯ ತಿಳಿದ ರಾಜ್ಯ ಬಿಜೆಪಿಯ ಕೆಲ ನಾಯಕರು ಶುಕ್ರವಾರ ಅವರಿಗೆ ಫೋನ್ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ‘ಮುನಿಸು ಮರೆತು ಪ್ರಚಾರಕ್ಕೆ ಬನ್ನಿ’ ಎಂದು ಕೇಳಿದಾಗಲೂ ಮೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕ ಬಳಿಕವೇ ಬರುವೆ ಎಂದು ಹೇಳಿ ಕಳಿಸಿದ್ದಾರೆ.
ನಡೆ ನಿಗೂಢ: ಸಂಗಣ್ಣ ಕರಡಿ ಜೊತೆ ಕಾಂಗ್ರೆಸ್ ಕೆಲ ನಾಯಕರು ಸಂಪರ್ಕದಲ್ಲಿದ್ದು ಅವರು ತಮ್ಮ ಮುಂದಿನ ನಡೆ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ’ಸ್ವತಂತ್ರ್ಯವಾಗಿ ಸ್ಪರ್ಧಿಸಲು ಸರಿಯಾದ ಸಮಯ ಇದಲ್ಲ’ ಎಂದರು. ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಹೀಗಾಗಿ ಕ್ಷೇತ್ರದ ಮತದಾರರಲ್ಲಿ ಕುತೂಹಲ ಮನೆ ಮಾಡಿದೆ.