ಹನುಮಸಾಗರ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿರುವ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹಗೊಂಡ ಕಾರಣ ಚರಂಡಿ ನೀರು ಶಾಲಾ ಆವರಣದ ಕಡೆ ಹರಿಯುತ್ತಿತ್ತು. ಶನಿವಾರ ಇದನ್ನು ಕಂಡ ಗ್ರಾ.ಪಂ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ ಹಾಗೂ ಅಧ್ಯಕ್ಷೆ ಶಂಕ್ರಮ್ಮನವರ ಮಗ ಕಳಕಪ್ಪ ಚರಂಡಿ ಸ್ವಚ್ಛಗೊಳಿಸಿದರು.
ಶುಕ್ರವಾರ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಚರಂಡಿಗೆ ತ್ಯಾಜ್ಯ ಹರಿದುಬಂದಿದೆ. ಕೊಳಚೆ ನೀರು ಹರಿಯುವ ಕೊಳವೆ ಸಣ್ಣದಾಗಿದೆ. ಆದ್ದರಿಂದ ನೀರು ಶಾಲಾ ಆವರಣದತ್ತ ಹರಿಯುತ್ತಿತ್ತು.
ಅದೇ ಮಾರ್ಗದಲ್ಲಿ ಹೊರಟಿದ್ದ ಉಪಾಧ್ಯಕ್ಷ ಮಂಜುನಾಥ ಹುಲ್ಲೂರ ಸ್ವತಃ ಕೊಳವೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ತ್ಯಾಜ್ಯವನ್ನೆಲ್ಲ ಸ್ವಚ್ಛಗೊಳಿಸಿ ಶಾಲಾ ಆವರಣದತ್ತ ಹರಿಯುತ್ತಿದ್ದ ನೀರನ್ನು ನಿಯಂತ್ರಿಸಿದರು.
‘ಜನಸೇವಕರು ಅಂದ್ರ ಎಲ್ಲದಕ್ಕೂ ಸಿದ್ಧ ಇರಬೇಕ್ರಿ, ಅಲ್ಲದೆ ಇದು ನಮ್ಮೂರ ಹೆಮ್ಮೆಯ ಶಾಲೆ’ ಎಂದರು.
‘ಸ್ವಚ್ಛತೆಗಾಗಿ ಸಣ್ಣ ಕೆಲಸ ಮಾಡಲು ಕೀಳಿರಿಮೆ ಇರಬಾರದು. ಇದೇ ರೀತಿ ಸಾರ್ವಜನಿಕರು ಮಳೆಗಾಲದಲ್ಲಿ ಚರಂಡಿಗೆ ತ್ಯಾಜ್ಯ ಕುಳಿತು ನೀರು ಹರಿಯದಂತಾದಾಗ ಗ್ರಾ.ಪಂ ಸಿಬ್ಬಂದಿಯನ್ನೇ ಕಾಯುತ್ತ ಕುಳಿತುಕೊಳ್ಳುವುದರ ಬದಲು ಎಲ್ಲರೂ ಈ ಕೆಲಸಕ್ಕೆ ಮುಂದಾಗಬೇಕು’ ಎಂದು ಹೇಳಿದರು.