ಕುಷ್ಟಗಿ: ‘ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಜನಪದ ಸಂಸ್ಕೃತಿ ಉಳಿಸುವುದಕ್ಕೆ ಅನೇಕ ಕಲಾವಿದರು ಶ್ರಮಿಸುತ್ತಿದ್ದಾರೆ. ಆದರೆ ಎಲೆ ಮರೆ ಕಾಯಿಯಂತಿರುವ ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ಬಿಜೆಪಿ ಮುಖಂಡ ಕಂದಕೂರಪ್ಪ ವಾಲ್ಮೀಕಿ ಹೇಳಿದರು.
ತಾಲ್ಲೂಕಿನ ನೆರಬೆಂಚಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮರ್ಥ ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇವಲ ಸಿನಿಮಾ, ಟೆಲಿವಿಷನ್ ಕಾರ್ಯಕ್ರಮಗಳಿಗೆ ಮರುಳಾಗುತ್ತಿರುವುದರಿಂದ ಜನಪದ ಕಲೆ ನಶಿಸುತ್ತಿದೆ. ಜನಪದ ಕಲಾವಿದರಿಗೆ ಬೆಲೆ ಇಲ್ಲದಂತಾಗಿದೆ. ಆದರೂ ಇಂಥ ಕಾರ್ಯಕ್ರಮಗಳಿಂದಲಾದರೂ ಆ ಸಂಸ್ಕೃತಿಯ ಜೀವಂತಿಕೆಯ ಮೂಲ ಪರಂಪರೆಯನ್ನು ಉಳಿಸಲು ಸಾಧ್ಯವಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.
ಕಂದಕೂರ ಗ್ರಾಮ ಪಂಚಾಯಿತಿ ಸದಸ್ಯ ಸಲೀಂಸಾಬ್ ಟೆಂಗುಂಟಿ, ಮೋಹನಲಾಲ್ ಜೈನ್, ಉಮೇಶ ಹಿರೇಮಠ ಇತರರು ಜನಪದ ಕಾರ್ಯಕ್ರಮ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ, ಉಪಾಧ್ಯಕ್ಷೆ ಶಾಂತಮ್ಮ ತಳವಾರ, ಸದಸ್ಯರಾದ ಜಯಶ್ರೀ ಉಪ್ಪಲದಿನ್ನಿ, ಹನಮಗೌಡ ಗೌಡ್ರ, ಶೇಖಪ್ಪ ಮ್ಯಾಗಳಮನಿ ಉಪಸ್ಥಿತರಿದ್ದರು. ಜನಪದ ಕಲಾವಿದರಾದ ಬಸವರಾಜ ಉಪ್ಪಲದಿನ್ನಿ ಹಾಗೂ ಸಂಗಡಿಗರು ಜನಪದ ಸಂಗೀತ ನೆರವೇರಿಸಿದರು.
ಕಲಾವಿದರಾದ ಅಯ್ಯಪ್ಪ ಬಡಿಗೇರ, ಶರಣಪ್ಪ ಬನ್ನಿಗೊಳ, ಪವಾಡೆಪ್ಪ ಚೌಡ್ಕಿ, ಮಾನಪ್ಪ ಮಂಡಲಮರಿ, ಈರಪ್ಪ ತೋಟದ, ದೊಡ್ಡಪ್ಪ ಕೈಲವಾಡಗಿ, ಶೇಷಗಿರಿ ಸೋನಾರ, ನಬಿಸಾಬ ಕುಷ್ಟಗಿ, ಷರೀಫ್ ಸಾಬ್ ನದಾಫ್, ರಾಮನಗೌಡ ಪಾಟೀಲ, ಆನಂದ ಬಂಡಿಹಾಳ, ಈರನಗೌಡ ಪೋಲಿಸ್ ಪಾಟೀಲ ಇತರರು ಇದ್ದರು.