ಹನುಮಸಾಗರ: ಹನುಮಸಾಗರ, ಹನುಮನಾಳ, ಹೂಲಗೇರಿ, ಯರಗೇರಿ ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವುದು ಶನಿವಾರ ಕಂಡುಬಂದಿತು.
ಸಾಮಾನ್ಯವಾಗಿ ಈ ಭಾಗದ ರೈತರು ಸೂರ್ಯಕಾಂತಿ, ಹೆಸರು, ತೊಗರಿ ಬಿತ್ತನೆಗೆ ಹೆಚ್ಚಿನ ಆದ್ಯತೆ ಕೊಟ್ಟಿರುವುದು ಕಂಡುಬಂದರೆ ಕಪ್ಪು ಭೂಮಿ ಹೊಂದಿರುವ ರೈತರು ಎಳ್ಳು ಹಾಗೂ ಹೆಸರು ಬಿತ್ತನೆ ಮಾಡುತ್ತಿರುವುದು ಕಂಡುಬಂತು.
ಈ ಬಾರಿ ಬಿತ್ತನೆಗೆ ಸೂಕ್ತವಾಗುವ ಸಮಯದಲ್ಲಿ ಮಳೆಯಾಗಿರುವುದರಿಂದ ರೈತರು ಸಾಮೂಹಿಕವಾಗಿ ಬಿತ್ತನೆ ಆರಂಭಿಸಿದ್ದಾರೆ. ಎತ್ತಿನ ಕೂರಗಿ ಪ್ರಮಾಣ ಕಡಿಮೆಯಾಗಿರುವುದರಿಂದ ಬಹುತೇಕ ರೈತರು ಟ್ರ್ಯಾಕ್ಟರ್ ಮೂಲಕ ಬಿತ್ತನೆ ನಡೆಸಿದ್ದಾರೆ.
ಗಡಚಿಂತಿ ಗ್ರಾಮದ ರೈತ ಮಹಾಂತೇಶ ಗರೇಬಾಳ ಮಾಹಿತಿ ನೀಡಿ,‘ಈ ಬಾರಿ ಮಳೆ ನಮಗೆ ವಿಶ್ವಾಸ ಮೂಡಿಸಿದೆ. ಮುಂದಿನ ಮಳೆ ಸರಿಯಾದ ಸಮಯಕ್ಕೆ ಸುರಿದರೆ ಕಪ್ಪು ಭೂಮಿಯಲ್ಲಿ ಎರಡು ಬೆಳೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.