ಕುಕನೂರು: ತಾಲ್ಲೂಕಿನ ಚಿಕೇನಕೊಪ್ಪ ಗ್ರಾಮದ ಆನಂದ ಶರಣಪ್ಪ ಹಳ್ಳಿಗುಡಿ ಅವರು 21 ವರ್ಷಗಳ ಕಾಲ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಭಾನುವಾರ ಸಂಜೆ ಗ್ರಾಮಕ್ಕೆ ಬಂದ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.
ಗ್ರಾಮದ ಜನರು ಭವ್ಯ ಸ್ವಾಗತ ಕೋರಿದರು. ಯೋಧನ ಪರ ಘೋಷಣೆ ಹಾಕಿ ಆರತಿ ಬೆಳಗಿ, ಪಟಾಕಿ ಸಿಡಿಸಿ, ಪುಷ್ಪಾರ್ಚನೆ ಮಾಡಿ ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಾಗೂ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಯೋಧನನ್ನು ಸ್ವಾಗತಿಸಿ ಮೆರವ ಣಿಗೆಗೆ ಚಾಲನೆ ನೀಡಿ ಗ್ರಾಮದ ಮುಖಂಡ ವೇದಮೂರ್ತಿ ಶ್ರೀಕಾಂತಯ್ಯ ಹಿರೇಮಠ ಮಾತನಾಡಿ, ಜಾತಿ, ಮತ, ಪಂಥ ಧರ್ಮವನ್ನು ಮೀರಿ ದೇಶದ ಗಡಿಯಲ್ಲಿ ಹಗಲಿರುಳು ಸೇವೆಯನ್ನು ಸಲ್ಲಿಸಿದ ಸೈನಿಕರಿಗೆ ಸಮಾಜ ಸದಾ ಗೌರವಿಸಬೇಕು ಎಂದರು.
ಕುಟುಂಬಕ್ಕಿಂತ ಈ ದೇಶ ಮುಖ್ಯ ಎಂದು ದೇಶದ ಜನತೆಗಾಗಿ ಪ್ರಾಣ ಲೆಕ್ಕಿಸದೇ ಹೋರಾಟ ಮಾಡುವ ಯೋಧರ ಕಾರ್ಯ ಸರ್ವಕಾಲಕ್ಕೂ ಶ್ಲಾಘನೀಯವಾಗಿದೆ. ಭಾರತ ದೇಶದಲ್ಲಿ ಆಸ್ತಿ, ಹಣ ಮಾಡಿದವರನ್ನು ಮೆರವಣಿಗೆ ಮಾಡೋದಿಲ್ಲ, ದೇಶ ಸೇವೆಯನ್ನು ಮಾಡಿ ಮರಳಿದ ಸೈನಿಕರಿಗೆ ಅತ್ಯದ್ಬುತ ಮೆರವಣಿಗೆ ಮಾಡಿ ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ, ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಯೋಧರ ಕಾರ್ಯ ಶ್ಲಾಘನೀಯ, ಯೋಧ ಆನಂದ ಹಳ್ಳಿಗುಡಿ ನಮ್ಮೂರಿನ ಹೆಮ್ಮೆಯ ಪುತ್ರರಾಗಿದ್ದಾರೆ ಎಂದರು.
ನಿವೃತ್ತ ಸೈನಿಕ ಆನಂದ ಹಳ್ಳಿಗುಡಿ ಮಾತನಾಡಿ, ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು. ತಾಯಿ ಭಾರತಾಂಬೆಯ ಸೇವೆ ಮಾಡಿದ್ದು ನನಗೆ ತೃಪ್ತಿ ತಂದಿದೆ. ದೇಶ ಸೇವೆಗೆ ಯುವ ಜನತೆ ಮುಂದೆ ಬರಬೇಕು, ಗ್ರಾಮದ ಅಭಿಮಾನಕ್ಕೆ ನಾನು ಸದಾ ಚಿರರುಣಿಯಾಗಿದ್ದೇನೆ ಎಂದರು.
ಮಹೇಂದ್ರ ಗದಗ, ಚಿದಾನಂದಪ್ಪ ಮ್ಯಾಗಳಮನಿ, ಲಲಿತಾ ಅಡಗಿಮನಿ, ವಿಜಯಲಕ್ಷ್ಮೀ ಮಂಗಳೂರು, ಮಹೇಶ ಗಾವರಳ, ಶ್ರೀಕಾಂತಗೌಡ ಅಂಕಲಿ, ಈಶಪ್ಪ ವಕ್ಕಳದ, ವಿರುಪಾಕ್ಷಪ್ಪ ಹಕಾರಿ, ಪ್ರಕಾಶ ಕಂಬಳಿ, ಅಶೋಕ ನಿಡಗುಂದಿ, ಸಂಗಪ್ಪ ಅಡಗಿಮನಿ, ಈರಪ್ಪ ತೆಕ್ಕಲಕೋಟಿ, ಶರಣಪ್ಪ ತುಮ್ಮರಗುದ್ದಿ, ಹನುಮರಡ್ಡಿ ವಕ್ಕಳದ, ಹನುಮಂತ ಮಂಗಳೂರು, ನೀಲಪ್ಪ ಮಾಟರಂಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.