ರಸ್ತೆಯಲ್ಲೇ ಕಾಮದಹನ ಪೊಲೀಸರ ಮೌನ
ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿಯೇ ಕಟ್ಟಿಗೆ ಟೈರ್ ಪ್ಲಾಸ್ಟಿಕ್ ವಸ್ತುಗಳನ್ನು ಗುಡ್ಡೆಹಾಕಿ ಬೆಂಕಿ ಹಚ್ಚಿ ಕಾಮದಹನ ನಡೆಸಿದ್ದರಿಂದ ಡಾಂಬರ್ ಕಾಂಕ್ರೀಟ್ ರಸ್ತೆಗಳು ಹಾಳಾದವು. ಮಲ್ಲಯ್ಯ ವೃತ್ತ ಕನಕವೃತ್ತ ಮುರುಡಿ ಭೀಮಜ್ಜ ವೃತ್ತ ಟಿಪ್ಪು ಸುಲ್ತಾನ್ ವೃತ್ತ ಹಳೆ ಬಜಾರ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಲ್ಲಿ ಯುವಕರು ಕಾಮದಹನದ ನೆಪದಲ್ಲಿ ಇಂಥ ವಿಕೃತಿ ಮೆರೆದದ್ದು ಕಂಡುಬಂದಿತು. ಅಪಾಯಕಾರಿ ರೀತಿಯಲ್ಲಿ ಬೆಂಕಿ ಕೆನ್ನಾಲಿಗೆಯಿಂದ ರಸ್ತೆಯಲ್ಲಿನ ವಾಹನ ಸವಾರರು ಪರದಾಡುವಂತಾಗಿತ್ತು. ಆದರೂ ಲೋಕೋಪಯೋಗಿ ಪುರಸಭೆ ಮತ್ತು ಪೊಲೀಸ್ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು ಎಷ್ಟು ಸರಿ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಪ್ರಶ್ನಿಸಿದರು.