ಸರಿಯಾಗಿ ಓದಲು ಹಾಗೂ ಬರೆಯಲು ಬಾರದ ಪ್ರಭು ಲೋಕರೆ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಪಡೆದು ನ್ಯಾಯಾಲಯದಲ್ಲಿ ಜವಾನನ ಹುದ್ದೆ ಗಿಟ್ಟಿಸಿಕೊಂಡಿದ್ದಾನೆ. ಆತನ ವಿದ್ಯಾಭ್ಯಾಸದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕೊಪ್ಪಳದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ಪ್ರಭು ವಿದ್ಯಾಭ್ಯಾಸದ ಕುರಿತು ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಎಫ್ಐಆರ್ ಕೂಡ ದಾಖಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪ್ರಭು ‘ದೆಹಲಿ ಎಜುಕೇಷನ್ ಬೋರ್ಡ್ ನಡೆಸಿರುವ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಪರೀಕ್ಷೆಗೆ ಹಾಜರಾಗಿ ನಾನೇ ಪರೀಕ್ಷೆ ಬರೆದಿದ್ದೇನೆ. ನಾನು ಪಡೆದಿರುವ ಅಂಕಪಟ್ಟಿ ರಾಜ್ಯದ ಎಸ್ಎಸ್ಎಲ್ಸಿ ಮಂಡಳಿಯದ್ದು ಅಲ್ಲ. ನನ್ನ ಜೊತೆ ರಾಜ್ಯದ ಅನೇಕರು ಉತ್ತೀರ್ಣರಾಗಿ ನ್ಯಾಯಾಲಯದಲ್ಲಿ ಜವಾನನ ಹುದ್ದೆಗೆ ಆಯ್ಕೆಯಾಗಿದ್ದಾರೆ’ ಎಂದು ಹೇಳಿದ್ದಾರೆ.