ಕನಕಗಿರಿ: ಕಳೆದ ಇಪ್ಪತ್ತು ದಿನಗಳ ಹಿಂದೆ ಈ ಭಾಗದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟುಮಾಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಸಮೀಪದ ಅಡವಿಬಾವಿ ಗ್ರಾಮದ ಪರಿಸರದಲ್ಲಿ ಅಂದಾಜು ನಾಲ್ಕು ವರ್ಷದ ಗಂಡು ಚಿರತೆ ಶನಿವಾರ ನಸುಕಿನ ಜಾವ ಬೋನಿಗೆ ಬಿದ್ದಿದೆ.
ಚಿರತೆಗೆ ನಾಯಿ ಎಂದರೆ ಎಲ್ಲಿಲ್ಲದ ಪ್ರೀತಿ, ಬೋನಿನ ಒಂದು ಭಾಗದಲ್ಲಿ ನಾಯಿಯನ್ನು ಬಿಟ್ಟು ಉಳಿದ ಭಾಗಕ್ಕೆ ಗಿಡದ ತಪ್ಪಲುಗಳಿಂದ ಮುಚ್ಚಿ ಚಾಣಾಕ್ಷತನ ಮೆರೆಯಲಾಗಿತ್ತು.ನಾಯಿಯನ್ನು ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದಿದೆ.
ಚಿರತೆ ಸೆರೆ ಸಿಕ್ಕ ವಿಷಯ ತಿಳಿದ ಅಡವಿಬಾವಿ, ಹುಲಸನಹಟ್ಟಿ, ಬಸರಿಹಾಳ, ಸೋಮಸಾಗರ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನ ತಂಡೋಪ ತಂಡವಾಗಿ ಬಂದು ಚಿರತೆ ವೀಕ್ಷಿಸಿದರು.
ವಲಯ ಅರಣ್ಯ ಅಧಿಕಾರಿ ಶಿವರಾಜ ಮೇಟಿ ಮಾತನಾಡಿ ಗ್ರಾಮಸ್ಥರ ಮನವಿ ಮೆರೆಗೆ ಚಿರತೆ ಸೆರೆಗೆ ಬೋನಿನ ವ್ಯವಸ್ಥೆ ಮಾಡಿ, ಪ್ರತಿದಿನನಾಯಿಗೆ ಆಹಾರ ನೀಡಲಾಗುತ್ತಿತ್ತು.
ಚಿರತೆ ಬೋನಿಗೆ ಬಿದ್ದಿದ್ದು,ಹೊಸಪೇಟೆ ಜಿಲ್ಲೆಯ ಕಮಲಾಪುರ ಪ್ರಾಣಿ ಸಂಗ್ರಹಾಲಯಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.