ಯಲಬುರ್ಗಾ (ಕೊಪ್ಪಳ ಜಿಲ್ಲೆ): ‘ಕೆಲಸ ಮಾಡಿದ ಶಾಸಕರಿಗೆ ಪಕ್ಷದಿಂದ ಟಿಕೆಟ್ ಸಿಕ್ಕೇ ಸಿಗುತ್ತದೆ. ಸಂಸದೀಯ ಮಂಡಳಿ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕೆಲಸ ಮಾಡಿದವರು, ಅಭಿವೃದ್ಧಿಗೆ ಆದ್ಯತೆ ಕೊಟ್ಟವರಿಗೆ ಟಿಕೆಟ್ ಸಿಗುತ್ತದೆ. ಈ ಬಗ್ಗೆ ವಿನಾಕಾರಣ ಗೊಂದಲ ಬೇಡ’ ಎಂದರು.
‘ಚುನಾವಣೆ ಘೋಷಣೆಗೆ ಪತ್ರಿಕಾಗೋಷ್ಠಿ ಕರೆದ ಕಾರಣ ಇಲ್ಲಿನ ಕಾರ್ಯಕ್ರಮದಲ್ಲಿ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ. ಹಾಲಪ್ಪ ಆಚಾರ್ ಆಶಯದಂತೆ ₹3000 ಕೋಟಿ ಅನುದಾನ ನೀಡಿ ಯಲಬುರ್ಗಾ ಕ್ಷೇತ್ರ ನೀರಾವರಿ ಮಾಡಲು ಆದ್ಯತೆ ಕೊಟ್ಟಿದ್ದೇನೆ. ಈ ನೀರು ಸದ್ಬಳಕೆ ಮಾಡಿಕೊಂಡರೆ ಇಲ್ಲಿನ ರೈತರು ಶ್ರೀಮಂತರಾಗುತ್ತಾರೆ’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್ ‘ನೀರಾವರಿ ವಿಷಯದಲ್ಲಿ ಕ್ಷೇತ್ರದ ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ’ ಎಂದರು.
’ಟಿಕೆಟ್ ಘೋಷಣೆ ಮಾಡದಿದ್ದರೆ ಎಲ್ಲಿ ಪಕ್ಷ ಬಿಟ್ಟು ಹೋಗುತ್ತಾರೊ ಎನ್ನುವ ಆತಂಕದಿಂದ ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ನಮ್ಮ ಪಕ್ಷಕ್ಕೆ ಅಂಥ ಭಯವಿಲ್ಲ. ವರಿಷ್ಠರು ಚರ್ಚಿಸಿ ಅರ್ಹರಿಗೆ ಟಿಕೆಟ್ ನೀಡುತ್ತಾರೆ’ ಎಂದರು.
ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಗೆ ಪೈಪೋಟಿ ಇದೆಯಲ್ಲ ಎನ್ನುವ ಪ್ರಶ್ನೆಗೆ ‘ಆಕಾಂಕ್ಷಿಗಳು ಎಲ್ಲ ಕಡೆ ಇದ್ದೇ ಇರುತ್ತಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಸೆ, ಆಶಯ ಮತ್ತು ನಿರೀಕ್ಷೆ ಇದ್ದೇ ಇರುತ್ತದೆ. ಬಿಜೆಪಿಯಲ್ಲಿ ಎಲ್ಲರಿಗೂ ಅವಕಾಶ ಸಿಗುತ್ತದೆ. ಸಿಗುವ ತನಕ ಕಾಯಬೇಕು’ ಎಂದು ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.