ಕೊಪ್ಪಳ: ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಪರ ಮತಯಾಚನೆಗೆ ಶುಕ್ರವಾರ ಸಂಜೆ ನಗರದಲ್ಲಿ ಬೃಹತ್ ರೋಡ್ ಶೋ ನಡೆಯಿತು.
ಗಡಿಯಾರ ಕಂಬದಿಂದ ಆರಂಭವಾದ ಮೆರವಣಿಗೆ ಸಾವಿರಾರು ಜನರ ಘೋಷಣೆ, ಸಂಭ್ರಮ ಮತ್ತು ಉದ್ಘೋಷಗಳ ನಡುವೆ ಅಶೋಕ ವೃತ್ತದ ತನಕ ಬಂದಿತು. ಈ ವೇಳೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ಸಂಸದ ಸಂಗಣ್ಣ ಕರಡಿ ಸೇರಿದಂತೆ ಹಲವು ನಾಯಕರು ಪ್ರಚಾರ ಮಾಡಿ ’ಮಂಜುಳಾ ಅವರಿಗೆ ಮತ ನೀಡಿ’ ಎಂದು ಮನವಿ ಮಾಡಿದರು.
ಅಶೋಕ ವೃತ್ತದ ಸಮೀಪ ಪ್ರಚಾರ ಭಾಷಣ ಮಾಡಿದ ಸಂಗಣ್ಣ ‘ದೇಶದಲ್ಲಿ ಕಾಂಗ್ರೆಸ್ ಆರು ದಶಕಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿದರೂ ಏನೂ ಅಭಿವೃದ್ಧಿ ಮಾಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜಗತ್ತು ಭಾರತವನ್ನು ತಲೆ ಎತ್ತಿ ನೋಡುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ವಿದೇಶಗಳಲ್ಲಿ ಭಾರತದ ಘನತೆ ಹೆಚ್ಚಾಗಿದೆ’ ಎಂದರು.
ಮಾಂಡವೀಯ ಮಾತನಾಡಿ ’ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಠೇವಣೆ ಕಳೆಯಿರಿ. ಶನಿವಾರ ಬಜರಂಗಬಲಿ ದಿನವಿದ್ದು, ಎಲ್ಲರೂ ಹನುಮಾನ್ ಚಾಲೀಸ್ ಪಠಣ ಮಾಡಿ. ಹನುಮನ ಪೂಜೆಗೆ ಅಡ್ಡಿಯಾಗುವವರಿಗೆ ತಕ್ಕ ಪಾಠ ಕಲಿಸಿ’ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಅಭ್ಯರ್ಥಿ ಮಂಜುಳಾ ‘ಕೊಪ್ಪಳವನ್ನು ಮಾದರಿ ಕ್ಷೇತ್ರನನ್ನಾಗಿ ಮಾಡಲಾಗುವುದು. ಮಹಿಳೆಯರಿಗೆ ಕೌಶಲ ತರಬೇತಿ, ನೀರಾವರಿ ಯೋಜನೆ ಕಲ್ಪಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.