ಅಳವಂಡಿ: ಗ್ರಾಮಿಣ ಭಾಗದಲ್ಲಿ ಅನೇಕ ಮೂಲ ಸೌಕರ್ಯಗಳ ಕೊರತೆ ನಡುವೆ ಹಾಗೂ ಬಡತನವನ್ನು ಮೆಟ್ಟಿ ನಿಂತು ವಿದ್ಯಾರ್ಥಿನಿಯೊಬ್ಬರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಅಳವಂಡಿ ಗ್ರಾಮದ ಮುದುಕನಗೌಡ ಗಾಳಿ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪ್ರತಿಭಾ ಕಂಬಳಿ ಶೇ 97.28 ಅಂಕ ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ.
ಕೊಪ್ಪಳ ತಾಲ್ಲೂಕಿನ ಗಬ್ಬೂರು ಗ್ರಾಮದ ರೇಣಪ್ಪ ಹಾಗೂ ನೀಲಮ್ಮ ದಂಪತಿಯ ಪುತ್ರಿ ಪ್ರತಿಭಾ ಕಂಬಳಿ. ಈಕೆಯ ಪಾಲಕರು ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿ ನಂಬಿ ಜೀವನ ಸಾಗಿಸುತ್ತಿದ್ದಾರೆ. 1ರಿಂದ 7ನೇ ತರಗತಿಯಲ್ಲಿ ಗಬ್ಬೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ.
ನಂತರ ಅಳವಂಡಿಯ ಬಾಲಕಿಯರ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪೂರ್ಣಗೊಳಿಸಿದ್ದಾರೆ. ಪ್ರತಿಭಾ ವಸತಿ ನಿಲಯದಲ್ಲಿ ಇದ್ದು ಅಭ್ಯಾಸ ಮಾಡಿದ್ದಾರೆ. ಪ್ರತಿಭಾ ಅವರ ಮನೆಯಲ್ಲಿ ಅತ್ಯಂತ ಬಡತನ ಇದ್ದರು ಕೂಡ ಪ್ರತಿಭಾಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಅವರ ಸಂಬಂಧಿಕರಾದ ಶಿಕ್ಷಕ ನಿಂಗಪ್ಪ ಕಂಬಳಿ, ಸುರೇಶ ಕಂಬಳಿ ಹಾಗೂ ಶಾಲೆಯ ಶಿಕ್ಷಕರು ಪ್ರತಿಭಾ ಶಿಕ್ಷಣಕ್ಕೆ ಎಲ್ಲಾ ರೀತಿಯ ಮಾರ್ಗದರ್ಶನ ನೀಡಿದ್ದಾರೆ.
ಪ್ರತಿಭಾ ಕನ್ನಡಕ್ಕೆ 123, ಇಂಗ್ಲಿಷ್ಗೆ 96, ಹಿಂದಿಗೆ 100, ಗಣಿತಕ್ಕೆ 100, ವಿಜ್ಞಾನಕ್ಕೆ 92 ಹಾಗೂ ಸಮಾಜಕ್ಕೆ 97 ಅಂಕಗಳನ್ನು ಪಡೆದಿದ್ದಾರೆ.
‘ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡುವ ರೂಢಿ ಬೆಳೆಸಿಕೊಂಡಿದ್ದೆ ಹಾಗೂ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದೆ. ಶಿಕ್ಷಕರು ಹೇಳಿದ ಪಾಠದಲ್ಲಿ ಸಮಸ್ಯೆ ಇದ್ದರೆ ಅಂದೇ ಶಿಕ್ಷಕರನ್ನು ಕೇಳಿ ಪರಿಹಾರ ಕಂಡುಕೊಳ್ಳುತ್ತಿದ್ದೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿಕೊಂಡು ಉನ್ನತ ಅಭ್ಯಾಸ ಮಾಡಬೇಕು ಎಂದುಕೊಂಡಿರುವೆ. ಮುಂದೆ ಎಎಸ್ಐ ಆಗುವ ಕನಸನ್ನು ಹೊಂದಿದ್ದೇನೆ’ ಎಂದು ವಿದ್ಯಾರ್ಥಿನಿ ಪ್ರತಿಭಾ ಕಂಬಳಿ ಪ್ರಜಾವಾಣಿಗೆ ತಿಳಿಸಿದರು.
ಈ ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ