ಕೊಪ್ಪಳ: ತೊಗಲುಗೊಂಬೆ ಕಲಾ ಪ್ರದರ್ಶನಕ್ಕಾಗಿ ತಮ್ಮ ಬದುಕನ್ನೇ ಅರ್ಪಣೆ ಮಾಡಿಕೊಂಡಿರುವ ಕೊಪ್ಪಳ ತಾಲ್ಲೂಕಿನ ಮೊರನಹಳ್ಳಿ ಗ್ರಾಮದ ಅಂತರರಾಷ್ಟ್ರೀಯ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಈ ಮೂಲಕ ಅವರು ತಾಯಿ ಹಾಗೂ ಮಗ ಇಬ್ಬರೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗೌರವಕ್ಕೆ ಭಾಜನರಾಗಿದ್ದಾರೆ. ತೊಗಲುಗೊಂಬೆ ಕಲಾವಿದೆಯಾಗಿದ್ದ ಕೇಶಪ್ಪ ಅವರ ತಾಯಿ ಭೀಮವ್ವ ಶಿಳ್ಳಿಕ್ಯಾತರ ಅವರಿಗೆ 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಈಗ ಮಗನಿಗೆ ಗೌರವ ಸಂದಿದೆ.
ಕೇಶಪ್ಪ ದೇಶದ ಹಲವಾರು ಭಾಗಗಳಲ್ಲಿ, ಅಮೆರಿಕ, ಪ್ಯಾರಿಸ್, ಇಟಲಿ, ಸ್ವಿಟ್ಜರ್ಲೆಂಡ್ ಸೇರಿದಂತೆ ಅನೇಕ ದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶನ ಮಾಡಿದ್ದಾರೆ. ಅಲೆಮಾರಿ ಬುಡಕಟ್ಟು ಜನಾಂಗದವರಾದ ಅವರು ಕರ್ನಾಟಕದಲ್ಲಿ ಹಂಪಿ ಉತ್ಸವ, ಆನೆಗೊಂದಿ ಉತ್ಸವ, ಮೈಸೂರು ದಸರಾ, ಕನಕಗಿರಿ ಉತ್ಸವ, ಧಾರವಾಡ ಉತ್ಸವ, ಕಿತ್ತೂರು ರಾಣಿ ಚನ್ನಮ್ಮ ಉತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕಲಾ ಪ್ರದರ್ಶನ ತೋರಿದ್ದಾರೆ.
ತಮ್ಮ ಒಂಬತ್ತನೇ ವಯಸ್ಸಿನಿಂದ ಕಲಾಸೇವೆ ಆರಂಭಿಸಿ ಕೇಶಪ್ಪ ಇದೇ ಕಲೆಯನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದಾರೆ. ಮಹಾಭಾರತ ಮತ್ತು ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟ ಮೂಲಕ ಪ್ರದರ್ಶನ ಮಾಡಿದ್ದಾರೆ.