ಕೊಪ್ಪಳ: ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಮಸಿ ಬಳಿಯುವುದಾಗಿ ಹೇಳಿರುವ ಜೆಡಿಎಸ್ ಮುಖಂಡ ಮಲ್ಲನಗೌಡ ಕೋನನಗೌಡ ಶನಿವಾರದ (ಆ. 5) ಒಳಗೆ ಕ್ಷಮೆ ಕೇಳಬೇಕು. ಇಲ್ಲವಾದರೆ ನಾವೇ ಕೋನನಗೌಡ ಮುಖಕ್ಕೆ ಮಸಿ ಬಳಿಯುತ್ತೇವೆ ಎಂದು ರಾಯರಡ್ಡಿ ಸಾಹೇಬರ ಅಭಿಮಾನ ಬಳಗದ ಮುಖಂಡ ಹನುಮೇಶ ಕಡೆಮನಿ ಎಚ್ಚರಿಕೆ ನೀಡಿದರು.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 500 ಮತಗಳನ್ನು ಪಡೆಯಲಾಗದ ಕೋನನಗೌಡ ಹಿರಿಯ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿದ್ದು ಯಾಕೆ. ರಾಯರಡ್ಡಿ ಅವರು ಬಳಸಿದ ಪದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬಹುದಿತ್ತು. ಆದರೆ ಮಸಿ ಬಳಿಯುವ ಬಗ್ಗೆ ಮಾತನಾಡಿದ್ದು ಸರಿಯಲ್ಲ ಎಂದು ಇಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜಕಾರಣದಲ್ಲಿ ಅದೃಷ್ಟವೂ ಮುಖ್ಯವಾಗುತ್ತದೆ ಎಂದು ರಾಯರಡ್ಡಿ ಅವರು ಭಾಷಣದಲ್ಲಿ ಮಾರ್ಮಿಕವಾಗಿ ಹೇಳಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು ಕೋನನಗೌಡ ಶಾಸಕರಿಗೆ ಮಸಿ ಬಳಿಯುವುದಾಗಿ ಹೇಳುವುದು ಸರಿಯೇ? ಎಂದು ಪ್ರಶ್ನಿಸಿದರು.
ಕೋನನಗೌಡ ನಾಳೆಯೊಳಗೆ ರಾಯರಡ್ಡಿ ಅವರ ಬಳಿ ಕ್ಷಮೆ ಕೇಳಬೇಕು, ಇಲ್ಲವಾದರೆ ಕೋನನಗೌಡನ ಮುಂದೆ ಶಾಸಕರನ್ನು ಕರೆದುಕೊಂಡು ಹೋಗುತ್ತೇವೆ. ಧೈರ್ಯವಿದ್ದರೆ ಕೋನನಗೌಡ ಮಸಿ ಬಳಿಯಲಿ ಎಂದು ಸವಾಲು ಹಾಕಿದರು.