ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ಸಂಭ್ರಮದ ಮದ್ದಾನೇಶ್ವರ ಜಾತ್ರೆ

ಸಾಮೂಹಿಕ ವಿವಾಹ, ವಟುಗಳಿಗೆ ಅಯಾಚಾರ, ಲಿಂಗದೀಕ್ಷೆ
Published 3 ಏಪ್ರಿಲ್ 2024, 16:11 IST
Last Updated 3 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದ ಮದ್ದಾನೇಶ್ವರ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಲಿಂಗೈಕ್ಯ ಕರಿಬಸವ ಶಿವಾಚಾರ್ಯರ 50ನೇ ಪುಣ್ಯಸ್ಮರಣೋತ್ಸವ ಇತರೆ ಶ್ರೀಗಳ ಪುಣ್ಯಾರಾಧನೆ ಹಾಗೂ ಕರಿಬಸವ ಸ್ವಾಮೀಜಿ ಅವರ 23ನೇ ಪಟ್ಟಾಧಿಕಾರ ಮಹೋತ್ಸವ ಬುಧವಾರ ಶ್ರದ್ಧೆ, ಭಕ್ತಿಯೊಂದಿಗೆ ನಡೆಯಿತು.

ಬೆಳಿಗ್ಗೆಯಿಂದ ಮಠದಲ್ಲಿ ಕರಿಬಸವ ಸ್ವಾಮೀಜಿ ಅವರ ನೇತೃತ್ವದಲ್ಲಿ ಕತೃಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ,ಅಭಿಷೇಕ, 22 ವಟುಗಳಿಗೆ ಅಯಾಚಾರ, ಲಿಂಗದೀಕ್ಷೆ, ಧ್ವಜಾರೋಹಣ, ಉಡಿ ತುಂಬು ಸಂಪ್ರದಾಯ, ಕರಿಬಸವ ಸ್ವಾಮೀಜಿಯವರ ತುಲಾಭಾರ ಸೇರಿದಂತೆ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ನಡೆದ ಸಾಮೂಹಿಕ ಮದುವೆಯಲ್ಲಿ ಆರು ಜೋಡಿ ವಧುವರರು ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ದಾಂಪತ್ಯ ಬದುಕಿಗೆ ಕಾಲಿರಿಸಿದರು.

ಬೇನೂರು ಓಂಕಾರ ಮಠದ ಸಿದ್ಧರೇಣುಕ ಸ್ವಾಮೀಜಿ ಅವರನ್ನು ಹೊತ್ತ ಅಡ್ಡಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಭ್ರಮದೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ಕುಂಭ ಕಲಶ ಹೊತ್ತ ಅಕ್ಕನ ಬಳಗದ ನೂರಾರು ಮಹಿಳೆಯರು, ಮಹಿಳಾ ತಂಡದ ಡೊಳ್ಳು ಕುಣಿತ, ಕುದುರೆ ಕುಣಿತ ಇತರೆ ಜನಪದ ಸಾಂಪ್ರದಾಯಿಕ ಕಲಾ ತಂಡಗಳು ಅಡ್ಡಪಲ್ಲಕ್ಕಿ ಉತ್ಸವದ ಮೆರಗು ಹೆಚ್ಚಿಸಿದವು. ನಂತರ ಮಹಾರಥೋತ್ಸವ, ಧರ್ಮಸಭೆ  ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಅನೇಕ ಪ್ರಮುಖರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT