ಕನಕಗಿರಿ: ‘ಡಿ. 27ರಂದು ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಧಿಕಾರಿಗಳು ಹಾಗೂ ಮತದಾರರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಜಿಲ್ಲಾ ಚುನಾವಣಾ ವೀಕ್ಷಕ ಡಾ.ಡಿ. ಷಣ್ಮುಖ ತಿಳಿಸಿದರು.
ಇಲ್ಲಿನ ನಂದಿ ಚಿತ್ರ ಮಂದಿರದಲ್ಲಿ ನಡೆದ ಪಿಆರ್ಒ ಹಾಗೂ ಎಪಿಆರ್ಒಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಚುನಾವಣಾ ಆಯೋಗದ ಸೂಚನೆಯಂತೆ ಮತಗಟ್ಟೆ ವ್ಯಾಪ್ತಿಯಲ್ಲಿ ಜನ ಅಂತರ ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಹಾಗೂ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತದಾನ ಮಾಡಬೇಕು ಎಂದು ಹೇಳಿದರು.
ಕೊರೊನಾ ಸೋಂಕಿತರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಮತಗಟ್ಟೆ ಕೇಂದ್ರದಲ್ಲಿ ಕಿಟ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ನೋಡಲ್ ಅಧಿಕಾರಿ ಕೃಷ್ಣ ಉಕ್ಕುಂದ ಮಾತನಾಡಿ,‘ಗ್ರಾಮ ಪಂಚಾಯಿತಿ ಚುನಾವಣೆಯನ್ನು ಅಧಿಕಾರಿಗಳು ಲಘುವಾಗಿ ಪರಿಗಣಿಸಬಾರದು’ ಎಂದರು.
ತಹಶೀಲ್ದಾರ್ ರವಿ ಅಂಗಡಿ ಮಾತನಾಡಿ,‘ಮತಗಟ್ಟೆಗಳಲ್ಲಿ ಎದುರಾಗುವ ಗೊಂದಲ, ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿ ತೆರೆಯಲಾಗಿದೆ. ಮತದಾರರುಸಹಾಯವಾಣಿ ಸಮಖ್ಯೆ 9113079488 ಹಾಗೂ 8951273083 ಸಂಪರ್ಕಿಸಬೇಕು ಎಂದು ತಿಳಿಸಿದರು.
ಪಿಎಸ್ಐ ಡಿ.ಸುರೇಶ, ಎಂಸಿಸಿ ತಂಡದ ನಾಯಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ, ಅಬಕಾರಿ ಇಲಾಖೆಯ ಉಪ ನಿರೀಕ್ಷಕಿ ಸುಮಾ ಮಾತನಾಡಿದರು.
ಪ್ರಾಂಶುಪಾಲ ಬಸವರಾಜ ಬಡಿಗೇರ ಹಾಗೂ ಪ್ರಾಧ್ಯಾಪಕ ಸರ್ಫರಾಜ ಆಹ್ಮದ ತರಬೇತಿ ನೀಡಿದರು. ಜಿಲ್ಲಾ ಚುನಾವಣಾ ವೀಕ್ಷಕರ ಸಹಾಯಕ ಕೃಷ್ಣಮೂರ್ತಿ ದೇಸಾಯಿ , ಶಿರಸ್ತೇದಾರರಾದ ಧನಂಜಯ ಮಾಲಗಿತ್ತಿ ಹಾಗೂ ವಿಶ್ವೇಶ್ವರಯ್ಯ ಸಾಲಿಮಠ ಇದ್ದರು. ಶಿಕ್ಷಕ ಪ್ರಭುಲಿಂಗ ವಸ್ತ್ರದ ನಿರೂಪಿಸಿದರು.