ಕುಕನೂರು: ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಕುಕನೂರಿನ ತಹಶೀಲ್ದಾರ್ ಕಚೇರಿ ಕಟ್ಟಡಕ್ಕೆ₹9 ಕೋಟಿ 95 ಲಕ್ಷ ಕೊಡಿಸಿರುವುದಾಗಿ ತಿಳಿಸಿರುತ್ತಾರೆ. ಆಗ ಹೊರಡಿಸಿರುವ ಆಡಳಿತಾತ್ಮಕ ಆದೇಶಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಕಾರಣ ಹಣ ನೀಡಿರುವುದಿಲ್ಲ ಎಂದು ಶಾಸಕ ಬಸವರಾಜ ರಾಯರಡ್ಡಿ ಆರೋಪಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ವಾಸ್ತವಿಕವಾಗಿ ತರಾತುರಿಯಲ್ಲಿ ಸರ್ಕಾರಿ ಆದೇಶ ಹೊರಡಿಸಿರುವುದು ತಿಳಿದುಬಂದಿರುತ್ತದೆ. ಈ ಹಣವನ್ನು 2023 -24ನೇ ಆರ್ಥಿಕ ಸಾಲಿನ ಹಣಕಾಸು ಲೆಕ್ಕ ಶೀರ್ಷಿಕೆಯಲ್ಲಿ ಸೇರಿಸಿಕೊಳ್ಳಬೇಕಾಗಿ ಆದೇಶಿಸುತ್ತಾರೆ, ಈಗ ಈ ಹಣಕಾಸನ್ನು ಒದಗಿಸುವ ಹೊರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಮೇಲೆ ಬಂದಿದೆ. ಹಾಲಪ್ಪ ಆಚಾರ್ ಅವರು ಸರ್ಕಾರದಿಂದ ಹಣ ಮಂಜೂರು ಮಾಡಿಸಿಲ್ಲ’ ಎಂದು ಆರೋಪಿಸಿದರು.
ಸರ್ಕಾರಕ್ಕೆ ಯಲಬುರ್ಗಾ ಪಿಡಬ್ಲ್ಯೂಡಿ ತಾಲ್ಲೂಕಾಧಿಕಾರಿ, ಪಿಡಬ್ಲ್ಯೂಡಿ ಜಿಲ್ಲಾಧಿಕಾರಿ ಸುಳ್ಳು ವರದಿ ನೀಡಿರುತ್ತಾರೆ, ಆದರೆ ಈವರೆಗೂ ತಹಶೀಲ್ದಾರ್ ಕಟ್ಟಡಕ್ಕೆ ಭೂಮಿಯನ್ನು ಜಿಲ್ಲಾಧಿಕಾರಿ ವಶಪಡಿಸಿಕೊಂಡಿಲ್ಲ. ಭೂಮಿ ವಶಪಡಿಸಿಕೊಳ್ಳಲು ಭೂಮಿಗೆ ಬೇಕಾದ ಪೂರ್ತಿ ಹಣ ಹಿಂದಿನ ಸರ್ಕಾರ ನೀಡಿಲ್ಲ. ತಾಲ್ಲೂಕಿನ ತಹಶೀಲ್ದಾರ್ ಕಟ್ಟಡಕ್ಕೆ ಕುಕನೂರಿನಲ್ಲಿ 9 ಎಕರೆ ಜಮೀನು ಸರ್ವೇ ನಂಬರ್ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ. ಆದರೆ ಭೂ ಮಾಲೀಕರು ಹೈಕೋರ್ಟ್ನಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳದಂತೆ ದಾವೆ ಹೂಡಿರುತ್ತಾರೆ. ಹೀಗಿದ್ದರೂ ಅಧಿಕಾರಿಗಳಿಂದ ಸುಳ್ಳು ಹೇಳಿಸಿ ಮಾರ್ಚ್ 21ರಂದು ತಹಶೀಲ್ದಾರ್ ಕಚೇರಿ ಕಟ್ಟಡಕ್ಕೆ ಹಣವನ್ನು ನೀಡದೆ ಆಡಳಿತಾತ್ಮಕ ಮಂಜೂರಾತಿ ಕೊಡಿಸಿರುತ್ತಾರೆ. ಸುಳ್ಳು ಹೇಳಿಸಿ ಆದೇಶ ಪಡೆದಿದ್ದರಿಂದ ಆಗಿನ ಎಂಜಿನಿಯರ್ ಮೇಲೆ ಶಿಸ್ತು ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.