ಬುಧವಾರ, ಮಾರ್ಚ್ 29, 2023
32 °C
ಆಟಿಕೆಗಳ ತಯಾರಿಕಾ ಘಟಕಕ್ಕೆ ನಿಯಮ ಬಾಹಿರ ಭೂಮಿ ಖರೀದಿ: ಆರೋಪ

ಆಟಿಕೆ ಸಾಮಾನುಗಳ ಘಟಕಕ್ಕೆ ಭೂಮಿ: ನ್ಯಾಯಾಲಯದ ಮೆಟ್ಟಿಲೇರಿದ ರೈತರು

ಮಂಜುನಾಥ ಅಂಗಡಿ Updated:

ಅಕ್ಷರ ಗಾತ್ರ : | |

ಕುಕನೂರು (ಕೊಪ್ಪಳ ಜಿಲ್ಲೆ): ಮೇಕ್ ಇನ್ ಇಂಡಿಯಾ ಯೋಜನೆಯಡಿ ತಾಲ್ಲೂಕಿನ ಭಾನಾಪುರ ಗ್ರಾಮದ ಬಳಿ ತಲೆ ಎತ್ತಲಿರುವ ದೇಶದ ಮೊದಲ ಆಟಿಕೆ ವಸ್ತುಗಳ ತಯಾರಿಕಾ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಯಮ ಬಾಹಿರವಾಗಿ ಭೂಮಿ ಖರೀದಿಸಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಕೆಲ ರೈತರು ಯಲಬುರ್ಗಾದ ಹಿರಿಯ ಶ್ರೇಣಿ ನ್ಯಾಯಾಲಯ ಮೆಟ್ಟಿಲೇರಿದ್ದಾರೆ.

ತಳಕಲ್ಲ ಗ್ರಾಮದ ರೈತ ಮಹಿಳೆಯರಾದ ನೀಲಮ್ಮ ಮತ್ತು ಫಕೀರಮ್ಮ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದು, ಭೂಮಿ ಮಾರಾಟ ಪ್ರಕ್ರಿಯೆಗೆ  ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

‘ಏಕಸ್’ ಕಂಪನಿಯು ಆಟಿಕೆ ವಸ್ತುಗಳ ತಯಾರಿಕಾ ಘಟಕ ನಿರ್ಮಿಸುವ ಹೊಣೆ ಹೊತ್ತಿದೆ. ಇದಕ್ಕಾಗಿ ರೈತರಿಂದ 225 ಎಕರೆ ಭೂಮಿ ಖರೀದಿಸಲಾಗಿದೆ. 2021ರ ಜನವರಿ 9ರಂದು ಘಟಕ ನಿರ್ಮಾಣ ಕಾಮಗಾರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಿದ್ದರು. ಸದ್ಯ ಕಾಮಗಾರಿ ನಡೆಯುತ್ತಿದೆ. ಭೂಮಾಲೀಕರಿಂದ ನೇರವಾಗಿ ಜಮೀನು ಖರೀದಿಸುವ ಬದಲು ಏಜೆಂಟರ ಮೂಲಕ ಖರೀದಿ ಮಾಡಲಾಗಿದೆ ಎಂದು ರೈತರು ದೂರಿದ್ದಾರೆ.

‘ಸೋಲಾರ್ ಘಟಕ ಅಳವಡಿಕೆ ಹೆಸರಿನಲ್ಲಿ ಮೊದಲು ಕೆಲವು ಎಕರೆ ಜಮೀನನ್ನು ಲೀಸ್‌ಗೆ ಪಡೆಯಲಾಗಿದೆ. ಈ ವೇಳೆ ಕೆಲ ರೈತರಿಂದ
ಏಜೆಂಟರು ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಪಡೆದು ಅದನ್ನು ಬಳಸಿ, ಜಮೀನನ್ನು ಕಂಪನಿಗೆ ಮಾರಿದ್ದಾರೆ. 30 ರೈತರಿಗೆ ಸೇರಿದ 70 ಎಕರೆ ಜಮೀನನ್ನು ಜಿಪಿಎ ಮಾಡಿ, ಸಂಬಂಧಿಸಿದ ರೈತರ ಗಮನಕ್ಕೆ ತರದೇ ಮಾರಲಾಗಿದೆ’ ಎಂಬ ಆರೋಪ ಕೇಳಿ ಬಂದಿದೆ.

‘ಭಾನಾಪುರ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ಆಟಿಕೆ ಕ್ಲಸ್ಟರ್‌ನ ಭೂಮಿ ಖರೀದಿ ಮಾಡುವಲ್ಲಿ ರೈತರಿಗೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡಲಾಗುವುದು’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಂದಪ್ಪ ಕೋಳೂರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು