ಬೆಣಕಲ್ (ಕುಕನೂರು): ‘ಸರ್ಕಾರಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಎಂಜಿನಿಯರ್ ವಿರುದ್ದ ಕ್ರಮ ಜರುಗಿಸಲಾಗುವುದು’ ಎಂದು ಶಾಸಕ ಹಾಲಪ್ಪ ಆಚಾರ್ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಬೆಣಕಲ್ ಗ್ರಾಮದ ಕೆರೆ ವೀಕ್ಷಣೆ ಮಾಡಿ ನಂತರ ಮಾತನಾಡಿದರು.
‘₹1 ಕೋಟಿ ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿ ಒಂದು ವರ್ಷವಾದರೂ ಪೂರ್ಣಗೊಂಡಿಲ್ಲ. ಕಳಪೆ ಕಾಮಗಾರಿ ಮಾಡುತ್ತಿರುವ ಈ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಕ್ಕದ ರೈತರ ಜಮೀನುಗಳಿಗೆ ತೊಂದರೆಯಾಗದಂತೆ ಕೆರೆ ಸರಹದ್ದನ್ನು ಸರಿಯಾಗಿ ನಿರ್ಮಿಸಿ ಇನ್ನು ಕೆಲವೇ ತಿಂಗಳುಗಳಲ್ಲಿ ಬೆಣಕಲ್ ಕೆರೆಯನ್ನು ಸಂಪೂರ್ಣವಾಗಿ ಅಚ್ಚುಕಟ್ಟಾಗಿ ನಿರ್ಮಿಸಿ ಜನರಿಗೆ ಸಹಕಾರಿಯಾಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಪಂಪಾಪತಿ, ಸಹಾಯಕ ಎಂಜಿನಿಯರ್ ಮುರಳೀಧರ್ ಪಾಟೀಲ, ಪ್ರಕಾಶ, ಶರಣಪ್ಪ ಮುರ್ಲಾಪುರ, ಮಾರುತಿ ಗಾವರಾಳ, ಕಳಕಪ್ಪ ಕಂಬಳಿ, ಈರಣ್ಣ ಹುಬ್ಬಳ್ಳಿ ಹಾಗೂ ಗವಿಸಿದ್ಧಪ್ಪ ಲೇಬಗೇರಿ ಇದ್ದರು.