ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಸಾಮಾಜಿಕ ಅಂತರಕ್ಕೆ ಸಿಮೆಂಟ್‌ ರಿಂಗು: ಬೀಳ್ತಿದ್ದಾರೆ ಸಾರ್ವಜನಿಕರು

ಉಪನೊಂದಣಾಧಿಕಾರಿಗಳ ನಿರ್ಧಾರಕ್ಕೆ ಸಾರ್ವಜನಿಕರ ಆಕ್ರೋಶ
Last Updated 3 ಜುಲೈ 2020, 14:03 IST
ಅಕ್ಷರ ಗಾತ್ರ

ಕೊಪ್ಪಳ:ಅಂತರ ಕಾಪಾಡಲು ಸರ್ಕಾರ ಸಾಮಾಜಿಕ ಜಾಗೃತಿ ಮೂಡಿಸಲುಮಾಧ್ಯಮಗಳ ಮೂಲಕ ಪ್ರತಿನಿತ್ಯ ಬಗೆಬಗೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ವಿವಿಧ ಸಂಘ, ಸಂಸ್ಥೆಗಳು ಈವರೆಗೆ ಹಲವಾರು ವಿಧದ ಕ್ರಮಗಳನ್ನು ಕೈಗೊಂಡು ಪ್ರಶಂಸೆಗೆ ಒಳಗಾಗಿವೆ. ಇನ್ನೂ ಕೆಲವು ಟೀಕೆಗೂ ಗುರಿಯಾಗಿವೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ಇದಕ್ಕಾಗಿ ಹೆಚ್ಚು ಜನ ಭೇಟಿ ನೀಡುವ ಅಂಗಡಿಗಳು, ಕಚೇರಿಗಳ ಹೊರಗೆ ಸಾಮಾನ್ಯವಾಗಿ ನೆಲದಲ್ಲಿ ಮೂರು ಅಡಿಗೊಂದರಂತೆ ಬಾಕ್ಸ್‌ಗಳ ಚಿತ್ರ ಬರೆಯುತ್ತಾರೆ. ಜನ ಆ ಬಾಕ್ಸಿನಲ್ಲಿ ನಿಂತು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಅಧಿಕಾರಿ ನೆಲದಡಿ ತೊಟ್ಟಿ ನಿರ್ಮಿಸಲು ಬಳಕೆಯಾಗುವ ಸಿಮೆಂಟ್‌ ರಿಂಗ್‌ಗಳನ್ನು ಕಚೇರಿಯ ಒಳಗೇ ಹಾಕಿಸಿ, ಸಾಮಾಜಿಕ ಅಂತರ ಕಾಪಾಡುವಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಉಪನೊಂದಣಾಧಿಕಾರಿ ಕಚೇರಿ ಅಧಿಕಾರಿ ರುದ್ರಮೂರ್ತಿ ಅಂತರ ಕಾಪಾಡುವ ನಿಟ್ಟಿನಲ್ಲಿ ಬೃಹತ್‌ ಗಾತ್ರದ ಸಿಮೆಂಟ್‌ ರಿಂಗ್‌ಗಳನ್ನು ತಮ್ಮ ಕಚೇರಿಯಲ್ಲಿ ಹಾಕಿಸಿದ್ದಾರೆ. ಇದರಿಂದ ನಗರದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿರುವ ಈ ಕಚೇರಿಗೆ ಭೇಟಿ ನೀಡುವ ಜನರು ಮೊಣಕಾಲುದ್ದದ ರಿಂಗುಗಳಲ್ಲಿ ನಿಂತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಸದಾ ಜನರಿಂದ ತುಂಬಿರುವ ಈ ಕಚೇರಿಯಲ್ಲಿ ಉಪನೊಂದಣಾಧಿಕಾರಿತಮ್ಮ ಚೇಂಬರ್‌ನಿಂದ ಕಛೇರಿಯ ಹೊರಹೋಗುವವರೆಗೂ ಸಾಲಾಗಿ ಇಂತಹ ಸಿಮೆಂಟ್‌ ರಿಂಗುಗಳನ್ನು ಹಾಕಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡುವುದು ಅವರ ಈ ಕ್ರಮದ ಹಿಂದಿನ ಉದ್ದೇಶವಾಗಿದೆ. ಆದರೆ ಇದರಿಂದ ‌ವಯಸ್ಸಾದವರು, ಅಂಗವಿಕಲರು, ಮಹಿಳೆಯರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ.

ಸಾರ್ವಜನಿಕರು ಈ ರಿಂಗುಗಳನ್ನು ದಾಟಲಾಗದೆ ಬಿದ್ದು ಗಾಯಗೊಂಡಿರುವ ಹಲವು ಘಟನೆಗಳು ಈಗಾಗಲೇ ನಡೆದಿವೆ. ಸಾಕಷ್ಟು ಅಪಾಯವನ್ನು ತಂದೊಡ್ಡುತ್ತಿರುವ ಈ ಕ್ರಮವನ್ನು ಸರ್ಕಾರಿ ಅಧಿಕಾರಿ ಮುಂದುವರೆಸಿರುವುದಕ್ಕೆ ಸಾರ್ವಜನಿಕ ವಲಯದಿಂದ ಟೀಕೆಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT