ಕುಷ್ಟಗಿ (ಕೊಪ್ಪಳ ಜಿಲ್ಲೆ): ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಹಮಾಲಿಯಾಗಿ ಕೆಲಸ ಮಾಡುತ್ತಿದ್ದ ದಿ.ಗ್ಯಾನಪ್ಪ ಗದ್ದಿ ಅವರ ಪುತ್ರ, ಮೂಡಬಿದರೆಯ ಆಳ್ವಾಸ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿರುವ ವಿನಾಯಕ ಗದ್ದಿ ಅವರು, ದ್ವಿತೀಯ ಪಿಯು ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ 98ರಷ್ಟು ಅಂಕ ಪಡೆದಿದ್ದಾರೆ.
ಕನ್ನಡದಲ್ಲಿ 97, ಇಂಗ್ಲೀಷ್ 94, ಭೌತಶಾಸ್ತ್ರ 98, ರಸಾಯನ ಮತ್ತು ಜೀವಶಾಸ್ತ್ರದಲ್ಲಿ ತಲಾ 100 ಮತ್ತು ಗಣಿತ ವಿಷಯದಲ್ಲಿ 99 ಸೇರಿ ಒಟ್ಟು 588 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
‘ವಿನಾಯಕ ಗದ್ದಿ ಅವರ ತಂದೆ ಗ್ಯಾನಪ್ಪ ಗದ್ದಿ ಈಚೆಗೆ ಮೃತಪಟ್ಟಿದ್ದಾರೆ. ಅವರು ತಮ್ಮ 9 ಮಕ್ಕಳಿಗೂ ಉತ್ತಮ ವಿದ್ಯೆ ಕೊಡಿಸುವ ಆಶಯ ಹೊಂದಿದ್ದರು. 4 ಮಕ್ಕಳು ಉನ್ನತ ವ್ಯಾಸಂಗ ಪಡೆಯುತ್ತಿದ್ದಾರೆ. ಕೊನೆಯ ಪುತ್ರ ವಿನಾಯಕ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ‘ ಎಂದು ತಾಯಿ ಹನುಮವ್ವ ಗದ್ದಿ ಹೇಳಿದರು.
ಮಗನನ್ನು ವೈದ್ಯನನ್ನಾಗಿ ಮಾಡಬೇಕು ಎಂಬ ಆಸೆ ಎಂದು ಹನುಮವ್ವ ತಿಳಿಸಿದರು.