ಯಲಬುರ್ಗಾ: ಪಟ್ಟಣದ ವಿಜಯ ದುರ್ಗಾದೇವಿ ದೇವಸ್ಥಾನದಲ್ಲಿಶರನ್ನವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ದೇವಿಪುರಾಣ ಮಹಾಮಂಗಲದ ಪ್ರಯುಕ್ತ ಅಂಬಾರಿ ಮೆರವಣಿಗೆ, ಕುಂಭೋತ್ಸವ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ ದೇವಿಯ ಮೂರ್ತಿಗೆ ವಿಶೇಷ ಪೂಜೆ ನಡೆದವು. ನಂತರ ಅಂಬಾರಿ ಮೆರವಣಿಗೆಯು ಪಟ್ಟಣದ ವಿವಿಧ ಬೀದಿಗಳಲ್ಲಿ ವಿಜೃಂಭಣೆಯಿಂದ ಜರುಗಿತು. ವಿವಿಧ ವಾಧ್ಯ ಮೇಳದೊಂದಿಗೆ ಸಾಕಷ್ಟು ಸಂಖ್ಯೆಯ ಮಹಿಳೆಯರು ಕುಂಭಗಳೊಂದಿಗೆ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಕಳೆದ 2 ವರ್ಷಗಳಲ್ಲಿ ಕೋವಿಡ್ ಕಾರಣ ಯಾವುದೇ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಪ್ರಸ್ತುತ ಯಾವುದೇ ಆತಂಕವಿಲ್ಲದೇ ದೇವಿಯ ಕೃಪೆಗೆ ಪಾತ್ರರಾಗುವ ರೀತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿ ದೇವಿಯ ಅದ್ದೂರಿ ಮೆರವಣಿಗೆ ನಡೆದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಆನೆಯ ಮೇಲಿನ ದೇವಿಯ ಮೂರ್ತಿಯನ್ನಿಟ್ಟು ಆಯೋಜಿಸಿದ್ದ ಅಂಬಾರಿ ಮೆರವಣಿಗೆ ಆಕರ್ಷಿಸಿತು. ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ನವೀನ ಗುಳಗಣ್ಣವರ, ಅಂದನಗೌಡ್ರ ಉಳ್ಳಾ ಗಡ್ಡಿ, ಬಸಪ್ಪ ಕಮ್ಮಾರ ಸೇರಿ ಇದ್ದರು.