ಈಗಾಗಲೇ ರೈತರು ಲಾಕ್ಡೌನ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಬಿರುಗಾಳಿ ಮತ್ತೊಂದು ಹೊಡೆತ ನೀಡಿದೆ. ಇದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ‘ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಪಪ್ಪಾಯ ಬೆಳೆ ಹಾಳಾಗಿದ್ದು ನೋಡಿ ಕಣ್ಣಾಗ ನೀರು ಬರುತ್ತಿದೆ. ಉತ್ತಮ ಇಳುವರಿ ಬಂತು ಎನ್ನುವಷ್ಟರಲ್ಲಿಯೇ ಗಾಳಿ ನನ್ನ ಬೆಳೆಯನ್ನು ಆಹುತಿ ಪಡೆದುಕೊಂಡಿತು. ಸರ್ಕಾರ ಪರಿಹಾರ ನೀಡಿದರೆ ಮಾತ್ರ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಶಿವಶರಣಪ್ಪ ಹೆಬ್ಲಿ ನೋವು ತೋಡಿಕೊಂಡರು. ಹನುಮನಾಳ, ಹೂಲಗೇರಿ, ಗೊಣ್ಣಾಗರ, ಗಡಚಿಂತಿ ಹಾಗೂ ಅಡವಿಭಾವಿ ಗ್ರಾಮಗಳಲ್ಲಿ ಕೆಲ ಮನೆಗಳ ಹೆಂಚುಗಳು ಹಾರಿ ಹೋಗಿವೆ. ಕೊಯ್ಲಿಗೆ ಬಂದಿದ್ದ ಮಾವಿನ ಫಸಲು ನೆಲಕ್ಕೆ ಹಾಸಿದ್ದು ಸಾಕಷ್ಟು ನಷ್ಟವಾಗಿರುವುದು ಕಂಡುಬಂತು.ವಿದ್ಯುತ್ ತಂತಿ ಕತ್ತರಿಸಿ ಬಿದ್ದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.