ಕೊಪ್ಪಳ: ಜಿಲ್ಲೆಯ ಮಾಟಲದಿನ್ನಿ ಗ್ರಾಮ ಪಂಚಾಯಿತಿಯಲ್ಲಿ ಹಿರೇವಂಕಲಕುಂಟ ಹೋಬಳಿ ಮಟ್ಟದಎಲ್ಲ ರೈತರಿಗೆ ಎರೆಹುಳು ಗೊಬ್ಬರದ ತೊಟ್ಟಿ ನಿರ್ಮಾಣ, ನಿರ್ವಹಣೆ ಮತ್ತು ಎರೆಹುಳು ಸಾಕಾಣಿಕೆಯ ಕುರಿತು ಪ್ರಾತ್ಯಕ್ಷಿತೆ ಹಾಗೂ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪ ಮಾತನಾಡಿ,‘ಕಪ್ಪು ಬಂಗಾರವೆಂದು ಕರೆಯಲ್ಪಡುವ ಎರೆಹುಳು ಗೊಬ್ಬರ ರೈತರ ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ, ಅಧಿಕ ಇಳುವರಿ ತರುವಲ್ಲಿ ಸಹಕಾರಿಯಾಗಿದೆ. ಪ್ರತಿವರ್ಷ ಎರೆಹುಳು ಗೊಬ್ಬರವನ್ನು ಬೆಳೆಗಳಿಗೆ ಬಳಸುವುದರಿಂದ ದೀರ್ಘ ಕಾಲದವರೆಗೆ ಬೆಳೆ ತೇವಾಂಶ ತಡೆಯುತ್ತದೆ. ಭೂಮಿಯಲ್ಲಿ ಸಾವಯವ ಇಂಗಾಲವನ್ನು ಸಂರಕ್ಷಿಸಲು ಇದು ಸಹಕಾರಿ’ ಎಂದು ಅವರು ಹೇಳಿದರು.
ಕೃಷಿ ಇಲಾಖೆ ಅಧಿಕಾರಿ ಪಂಪಾಪತಿ ಮಾತನಾಡಿ,‘ಈಗಾಗಲೇ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಿರೇವಂಕಲಕುಂಟ ಹೋಬಳಿಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ 25 ಎರೆಹುಳು ಘಟಕ ನಿರ್ಮಾಣ ಮಾಡಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಬೇಡಿಕೆ ನೀಡಿದ ಫಲಾನುಭವಿಗಳಿಗೂ ಸಹ ಘಟಕ ನಿರ್ಮಾಣ ಮಾಡಲು ಅವಕಾಶವಿದೆ. ಕೃಷಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನೈಸರ್ಗಿಕವಾಗಿ ಅತಿ ಕಡಿಮೆ ಖರ್ಚಿನಲ್ಲಿ ಸಾವಯವ ಗೊಬ್ಬರ ತಯಾರು ಮಾಡಿಕೊಂಡು ರೈತರು ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು’ ಎಂದು ಹೇಳಿದರು.
ಪಿಡಿಒಹನಮಂತಗೌಡ ಪೊಲೀಸ್ ಪಾಟೀಲ, ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಹೊಂದಾಲಿ, ಉಪಾಧ್ಯಕ್ಷ ಭೈರಪ್ಪ ನಡುಕಟ್ಟಿ, ಸದಸ್ಯರಾದ ಆದಯ್ಯ ಹಿರೇಮಠ, ಹನುಮಂತಪ್ಪ ಹಂಚಿನಾಳ, ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ ಹಾಗೂ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಇದ್ದರು.