ಹುಲಿಗಿ (ಮುನಿರಾಬಾದ್): ‘ಸಮಾಜದಲ್ಲಿ ಒಬ್ಬ ವ್ಯಕ್ತಿ ಅಭಿವೃದ್ಧಿ ಹೊಂದುತ್ತಾನೆ ಎಂದರೆ ಅವರಿಗೆ ಪ್ರೋತ್ಸಾಹ ಕೊಟ್ಟು ಮೇಲಕ್ಕೆ ಏರಲು ಸಹಾಯ ಮಾಡಬೇಕು. ಕಾಲಿಡಿದು ಎಳೆಯುವ ಪ್ರವೃತ್ತಿ ನಿಲ್ಲಬೇಕು’ ಎಂದು ಮೈನಳ್ಳಿ ಮಠದ ಸಿದ್ಧೇಶ್ವರ ಶಿವಾಚಾರ್ಯ ಹೇಳಿದರು.
ಹುಲಿಗಿಯಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜೋಳಿಗೆ ಹಿಡಿದು ಮನೆ–ಮನೆಗೆ ತೆರಳಿ ಭಿಕ್ಷೆಬೇಡಿ ದಾಸೋಹದ ಜತೆಗೆ ಶಿಕ್ಷಣ ನೀಡಿದ ನಿಸ್ವಾರ್ಥ ಸಮಾಜ ನಮ್ಮದು. ಸದ್ಯ ಬಡತನ ಮತ್ತು ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಸಂಘಟನೆಗೊಳ್ಳುವ ಮೂಲಕ ಸರ್ಕಾರದ ಮೀಸಲಾತಿ ಹಕ್ಕನ್ನು ಪಡೆಯಬೇಕು’ ಎಂದು ತಿಳಿಸಿದರು.
ತುಂಗಭದ್ರಾ ಕಾಡಾ ಅಧ್ಯಕ್ಷ ಬಿ.ಎಚ್.ಎಂ ತಿಪ್ಪೇರುದ್ರಸ್ವಾಮಿ ಮಾತನಾಡಿ,‘ಜನ ಸಂಖ್ಯೆಗೆ ಅನುಗುಣವಾಗಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ನಮ್ಮ ಸಮಾಜಕ್ಕೆ ಮೀಸಲಾತಿ ಹಕ್ಕು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದರು. ಜಂಗಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಯ್ಯ ಹಿರೇಮಠ ಮಾತನಾಡಿ,‘ಸಮಾಜ ಬಾಂಧವರಿಂದ ದೇಣಿಗೆ ಸಂಗ್ರಹಿಸಿ ಸುಮಾರು ₹80 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿದ್ದೇವೆ. ಸಂಘಟನೆ ಮೂಲಕ ಏನನ್ನು ಬೇಕಾದರೂ ಸಾಧಿಸಬಹುದು. ತಿಂಗಳಿಗೊಮ್ಮೆ ಸಭೆ ಸೇರುವ ಮೂಲಕ ಸಂಘಟನೆಗೆ ಮುಂದಾಗಿ’ ಎಂದರು.
ಶಹಾಪುರ ಗ್ರಾಮದ ಉದ್ಯಮಿ ಗಿರೀಶ್ ಹಿರೇಮಠ, ಕೊಟ್ರಯ್ಯ ಸ್ವಾಮಿ ಮಾತನಾಡಿದರು.
ಷಟಸ್ಥಲ ಧ್ವಜಾರೋಹಣದ ನಂತರ ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ನಡೆಯಿತು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ನಂದಿಪುರ ಮಠದ ಡಾ.ಮಹೇಶ್ವರ ಶಿವಾಚಾರ್ಯರು ಮೆರವಣಿಗೆಗೆ ಚಾಲನೆ ನೀಡಿದರು.
ಕಂಪಸಾಗರದ ನಾಗಯ್ಯಸ್ವಾಮಿ ಹಿರೇಮಠ, ಸಿದ್ದರಾಮಯ್ಯ ಸ್ವಾಮಿ, ಸಂಗಾಪುರ ಮಠ, ಹಂಪಯ್ಯ ಸ್ವಾಮಿ ಬನ್ನಿಮಠ ಹಾಗೂ ಕಾಶಯ್ಯಸ್ವಾಮಿ ಇದ್ದರು. ವೀರಭದ್ರಯ್ಯ ಭೂಸನೂರಮಠ ಸ್ವಾಗತಿಸಿ, ನಿರೂಪಿಸಿದರು. ಶಿವಪ್ರಕಾಶ ವಂದಿಸಿದರು.