ಗಂಗಾವತಿ: ‘ಪಶುಸಂಗೋಪನೆ ದೇಶದ ಸಂಪತ್ತು. ಇದರಿಂದ ಸಾವಯವ ಕೃಷಿಗೂ ಅನುಕೂಲವಾಗುತ್ತದೆ. ಆದ್ದರಿಂದ ವೈಜ್ಞಾನಿಕ ನಿರ್ವಹಣೆ ಅಗತ್ಯ’ ಎಂದು ಉಪನಿರ್ದೇಶಕ ಡಾ.ನಾಗರಾಜ ಎಚ್ ಹೇಳಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕೋಳಿ ಶೀತ ಜ್ವರ, ಹುಚ್ಚು ನಾಯಿ ರೋಗ ಹಾಗೂ ಪ್ರಾಣಿಜನ್ಯ ರೋಗಗಳ ನಿಯಂತ್ರಣದ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ.ವಿ.ರವಿ ಮಾತನಾಡಿ,‘ಇಲಾಖೆ ಸಿಬ್ಬಂದಿಗೆ ನಿಯತಕಾಲಿಕವಾಗಿ ತಾಂತ್ರಿಕ ಕಾರ್ಯಾಗಾರಗಳನ್ನು ನಡೆಸಿಕೊಟ್ಟು ಅವರ ತಾಂತ್ರಿಕ ಜ್ಞಾನವನ್ನು ಪುನಶ್ಚೇತನಗೊಳಿಸಬೇಕು’ ಎಂದು ತಿಳಿಸಿದರು.
ಕೋಳಿ ಶೀತ ಜ್ವರ, ಹುಚ್ಚು ನಾಯಿ ರೋಗ (ರೇಬೀಸ್) ಹಾಗೂ ಪ್ರಾಣಿಜನ್ಯ ರೋಗಗಳ ನಿಯಂತ್ರಣದ ಕುರಿತು ಉಪನ್ಯಾಸ ನೀಡಲಾಯಿತು.
ಸಹಾಯಕ ನಿರ್ದೇಶಕ ಡಾ.ಪ್ರಕಾಶ ಚೂರಿ, ಪಶು ವಿಜ್ಞಾನಿ ಡಾ.ಮಹಾಂತೇಶ ಎಂ.ಟಿ, ಎಂ.ಎಚ್.ವೆಂಕಟರಾಜು, ಎಸ್.ಎಚ್.ಘಂಟಿ, ಕಾರ್ಯದರ್ಶಿ ಕೆ.ಸಿ.ಸೋಮಶೇಖರ ಹಾಗೂ ಡಾ.ಆದರ್ಶ ನೂಲ್ವಿ ಇದ್ದರು.