ಕೊಪ್ಪಳ: ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಹುಲಗಿಯಲ್ಲಿ ಎರಡು ದಿನಗಳ ಹಿಂದೆ ಹೆತ್ತ ತಾಯಿಯನ್ನೇ ಬಿಟ್ಟು ಮಗ ಹೊರಟು ಹೋಗಿದ್ದು, ಅಜ್ಜಿಯನ್ನುಹಿರಿಯ ನಾಗರಿಕರ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
80 ವರ್ಷದ ಖಾಸೀಂ ಬಿ, ತನ್ನದು ಉಜ್ಜಯಿನಿ ಗ್ರಾಮವೆಂದು ಮಾತ್ರ ಹೇಳಿಕೊಂಡಿದ್ದು, ಅಧಿಕಾರಿಗಳಿಗೆ ಈ ಕುರಿತು ಸರಿಯಾದ ಮಾಹಿತಿ ನೀಡಿಲ್ಲ. ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಫೋನ್ ಕೊಟ್ಟು ಹೋಗಿದ್ದಾನೆ ಎಂದು ಗೊತ್ತಾಗಿದೆ.
ರಾತ್ರಿಯಾದರೂ ಅಜ್ಜಿ ಬಳಿ ಯಾರೂ ಬರದಿರುವುದನ್ನು ಗಮನಿಸಿದ ಸ್ಥಳೀಯರು ಆಹಾರ ಕೊಟ್ಟು ನೆರವಾಗಿದ್ದಾರೆ. ಮಲಗಲು ವ್ಯವಸ್ಥೆ ಮಾಡಿದ್ದಾರೆ. ಹಿರಿಯ ನಾಗರಿಕರ ಸಹಾಯವಾಣಿ ಕ್ಷೇತ್ರದ ಅಧಿಕಾರಿ ಮುತ್ತಣ್ಣ ಗುದ್ನೆಪ್ಪನವರ್ ಹಾಗೂ ಸಿಬ್ಬಂದಿ ಅಜ್ಜಿಯನ್ನು ರಕ್ಷಿಸಿದ್ದಾರೆ.