ತಾಂಬಾ: ‘ವಿಶ್ವ ಹಿಂದೂ ಪರಿಷತ್ನ ಕ್ಷೇತ್ರೀಯ ಸಂಘಟನಾ ಸಂಚಾಲಕ ಗೋಪಾಲ್, ಟಿಪ್ಪು ಸುಲ್ತಾನ್ ಚರಿತ್ರೆ ಅರಿತಿಲ್ಲ. ಈ ಕುರಿತು ಬಹಿರಂಗ ಚರ್ಚೆ ನಡೆಸುವುದಾದರೆ, ವೇದಿಕೆಯನ್ನು ನಾನೇ ಸಿದ್ಧಗೊಳಿಸುವೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಸಿಂಪೀರ ವಾಲೀಕಾರ ಹೇಳಿದರು.
‘ಟಿಪ್ಪು ಕುರಿತಂತೆ ಗೋಪಾಲ್ ಇಂಡಿಯಲ್ಲಿ ನೀಡಿರುವ ಹೇಳಿಕೆ ಆಕ್ಷೇಪಾರ್ಹವಾದುದು. ಮುಂದಿನ ವರ್ಷದಿಂದ ಟಿಪ್ಪು ಜಯಂತಿ ಆಚರಿಸಲ್ಲ ಎಂದು ಹೇಳಿರುವುದು ಉದ್ಧಟತನದಿಂದ ಕೂಡಿದೆ’ ಎಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.
‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭಾರತೀಯ ಮುಸಲ್ಮಾನರ ವಿರೋಧವಿಲ್ಲ. ಆದರೆ ಇದೂವರೆಗೂ ಮಂದಿರ ನಿರ್ಮಿಸದೇ ಯುವ ಸಮೂಹದಲ್ಲಿ ತಪ್ಪು ಕಲ್ಪನೆ ಮೂಡಿಸಿ, ಸೌಹಾರ್ದತೆಗೆ ಧಕ್ಕೆ ತರುವ ಯತ್ನವನ್ನು ಸಂಘ ಪರಿವಾರದ ಸಂಘಟನೆಗಳು ಮಾಡುತ್ತಿವೆ’ ಎಂದು ದೂರಿದರು.
‘ಗೋವಿನ ಬಗ್ಗೆ ಮಾತನಾಡುವ ಗೋಪಾಲ, ಎತ್ತುಗಳ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ. ಇವರು ಗೋ ರಕ್ಷಕರ ಸೋಗು ಹೊಂದಿರುವವರು ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಎತ್ತು ನಂದಿಯ ಸ್ವರೂಪ. ರೈತರ ಆರಾಧ್ಯ ದೈವ. ಆಕಳು ಮತ್ತು ಎತ್ತುಗಳ ಹತ್ಯೆ ಆಗಬಾರದು. ಆದರೆ ಇವರು ಧರ್ಮಾಂದತೆಯ ವಿಷ ಬೀಜ ಬಿತ್ತುತ್ತಿದ್ದಾರೆ’ ಎಂದು ಹಾಸಿಂಪೀರ ವಾಲೀಕರ ಆಕ್ರೋಶ ವ್ಯಕ್ತಪಡಿಸಿದರು.