ಕವಲೂರು (ಕೊಪ್ಪಳ ತಾ): ಸಮೀಪದ ಕವಲೂರು -ಹಂದ್ರಾಳ ರಸ್ತೆ ಮಾರ್ಗದಲ್ಲಿರುವ ಚಿಕ್ಕಹಳ್ಳಕ್ಕೆ ನಿರ್ಮಿಸಿರುವ ತಳಮಟ್ಟದ ಸೇತುವೆ ಮೇಲೆ ಚಲಿಸುತ್ತಿದ್ದ ಟ್ರ್ಯಾಕ್ಟರ್ ಹಳ್ಳಕ್ಕೆ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಯಿತು.
ಸೇತುವೆ ಮೊದಲೇ ಶಿಥಿಲಗೊಂಡಿದ್ದು, ಈಚೆಗೆ ಸುರಿದ ಮಳೆಯಿಂದ ಮತ್ತಷ್ಟು ಮಣ್ಣು ಜರಿದು ಹಳ್ಳದ ಪಾಲಾಗಿತ್ತು. ಟ್ರ್ಯಾಕ್ಟರ್ ಚಾಲಕ ಅನಿವಾರ್ಯವಾಗಿ ಇದೇ ರಸ್ತೆಯ ಮೂಲಕ ನಿಧಾನವಾಗಿ ಸಾಗುತ್ತಿದ್ದಾಗ ಮಣ್ಣು ಕುಸಿದು ಒಂದು ಆಳದ ಹಳ್ಳಕ್ಕೆ ಬಿತ್ತು. ಚಾಲಕ ಅಪಾಯದಿಂದ ಪಾರಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.
ಟ್ರ್ಯಾಕ್ಟರ್ ನೀರಿನಿಂದ ಎತ್ತಲು ಜೆಸಿಬಿ ಬಳಸಲಾಯಿತು. ಸುಮಾರು ಹೊತ್ತು ನಡೆದ ಕಾರ್ಯಾಚರಣೆಯಿಂದ ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಅಳವಂಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ತರಿಸಿ ತೆರವುಗೊಳಿಸಿದರು.
ಈಚೆಗೆ ಶಿಥಿಲಗೊಂಡ ಸೇತುವೆ ಕುರಿತು ಸಮಗ್ರ ವರದಿಯನ್ನು ಪತ್ರಿಕೆ ಪ್ರಕಟಿಸಿತ್ತು. ಜೀವಹಾನಿ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು ಇಂತಹ ಸೇತುವೆಗಳನ್ನು ದುರಸ್ತಿ ಮಾಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿರುವುದು ಕಂಡು ಬಂತು. ಕೆಲವು ಕಡೆ ಹಳ್ಳಕ್ಕೆ ಅವೈಜ್ಞಾನಿಕ ಬಾಂದಾರ ನಿರ್ಮಾಣದಿಂದ ನೀರು ನಿಂತು ಹಿನ್ನೀರು ಸೇತುವೆಗಳ ಮೇಲೆ ಹರಿದು ಸಂಚಾರ ಬಂದ್ ಆಗುವ ಪರಿಸ್ಥಿತಿ ಇದೆ. ಇದರಿಂದ ಸೇತುವೆಗಳು ಮೇಲಿಂದ ಮೇಲೆ ಶಿಥಿಲಗೊಂಡು ಗ್ರಾಮಸ್ಥರ ಸಂಚಾರಕ್ಕೆ ಅಡ್ಡಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.