ಗಂಗಾವತಿ: ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿ ಯಾರಾದರು ಮೃತಪಟ್ಟರೆ, ಆ ದಿನ ಗ್ರಾ.ಪಂ ಅಧಿಕಾರಿಗಳು ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಸ್ಥಗಿತ ಮಾಡುವ ಪದ್ಧತಿ ಚಾಲ್ತಿಯಲ್ಲಿದೆ.
ಈ ಪದ್ಧತಿಯು 15 ವರ್ಷಗಳಿಂದ ರೂಢಿಯಲ್ಲಿದೆ. ಗ್ರಾಮದ ಅನೇಕರಿಗೆ ಈ ಪದ್ಧತಿ ಇಷ್ಟವಾಗಿಲ್ಲ. ಇದೊಂದು ಸಂಪ್ರದಾಯವಾಗಿ ಪಾಲನೆ ಆಗುತ್ತಿದೆ ಎಂದು ಇನ್ನೂ ಕೆಲವರು ಭಾವಿಸಿದ್ದಾರೆ.
ಗ್ರಾಮದಲ್ಲಿ 4 ಸಾವಿರಕ್ಕೂ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಕೂಲಿ ಮಾಡಿ ಜೀವನ ನಡೆಸುವವರ ಸಂಖ್ಯೆಯೇ ಹೆಚ್ಚಿಗೆ ಇದೆ. ಪ್ರತಿ ದಿನ ಗ್ರಾ.ಪಂ ಪೂರೈಸುವ ನೀರನ್ನು ಕುಡಿಯಲು, ಅಡುಗೆಗೆ, ಸ್ನಾನ ಮಾಡಲು ಬಳಕೆ ಮಾಡುತ್ತಾರೆ.
ಗ್ರಾಮದ ನಿವಾಸಿ ಮೃತಪಟ್ಟಾಗ ಗ್ರಾಮಕ್ಕೆ ನೀರಿನ ಪೂರೈಕೆ ಸಂಪೂರ್ಣ ಸ್ಥಗಿತ ಮಾಡಲಾಗುತ್ತದೆ. ಮೃತನ ಅಂತ್ಯ ಸಂಸ್ಕಾರ ಮುಗಿಯುವವರೆಗೆ ಗ್ರಾಮಸ್ಥರು ನೀರಿಗಾಗಿ ಪರದಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಮನವಿಗೆ ಸಿಗದ ಸ್ಪಂದನೆ:
ಗ್ರಾಮದಲ್ಲಿ ಯಾರಾದರು ಮೃತಪಟ್ಟರೆ ನೀರು ಪೂರೈಕೆ ನಿಲ್ಲಿಸುವುದು ಸರಿಯಲ್ಲ. ಕೂಡಲೇ ಈ ಪದ್ಧತಿ ಕೈಬಿಟ್ಟು, ನೀರು ಪೂರೈಕೆ ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ.
’ಹಲವು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಈ ಪದ್ಧತಿ ಯಾವಾಗಲೋ ಅಂತ್ಯವಾಗಬೇಕಿತ್ತು. ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಸಕ್ತಿ ತೋರಿಸದ ಕಾರಣಕ್ಕೆ ಈ ಪದ್ಧತಿ ಹಾಗೆಯೇ ಉಳಿದುಕೊಂದು ಬಂದಿದೆ‘ ಎಂದು ಗ್ರಾಮಸ್ಥ ಪ್ರಕಾಶ್ ಹೇಳುತ್ತಾರೆ.