ಕುಷ್ಟಗಿ: ಮುಂದಿನ ವರ್ಷದ ಜುಲೈ ವೇಳೆಗೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಪೂರ್ಣಗೊಳಿಸಲು ದೃಢಸಂಕಲ್ಪ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶುಕ್ರವಾರ ಹೇಳಿದರು.
ತಾಲ್ಲೂಕಿನ ಮುದುಟಗಿ ಬಳಿ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಕೊಪ್ಪಳ ಏತ ನೀರಾವರಿ 2ನೇ ಹಂತದ ಕಾಮಗಾರಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಾಮಗಾರಿ ಅನುಷ್ಠಾನದ ವಿಷಯದಲ್ಲಿ ಎಷ್ಟೇ ಕಠಿಣ ಪ್ರಸಂಗಗಳು ಬಂದರೂ ಅವುಗಳನ್ನು ಎದುರಿಸಿ ಈ ಭಾಗದ ಜಮೀನುಗಳಿಗೆ ನೀರುಣಿಸುವ ಮೂಲಕ ಬರದ ನಾಡು ಎಂಬ ಹಣೆಪಟ್ಟಿಯನ್ನು ತೊಲಗಿಸಲಾಗುವುದು ಎಂದರು.
ನೀರಾವರಿ ವಿಚಾರದಲ್ಲಿ ಪಕ್ಷ ಅಥವಾ ಜಾತಿಗೆ ಮಣೆಹಾಕದೆ ಪಕ್ಷಾತೀತವಾಗಿ ರೈತರಿಗೆ ನ್ಯಾಯ ಒದಗಿಸಬೇಕೆಂಬುದು ಎಂಬುದು ನನ್ನ ಆಶಯ. ರೈತರೂ ಸಹಕಾರ ನೀಡಬೇಕು ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಈ ಯೋಜನೆಗಳಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಒಂದು ಪೈಸೆ ಹಣ ನೀಡಿರಲಿಲ್ಲ. ಆದರೆ, ರಮೇಶ್ ಜಾರಕಿಹೊಳಿ ಅವರು ನೀರಾವರಿ ಯೋಜನೆಗಳ ಅನುಷ್ಠಾನ ಮತ್ತು ತುಂಗಭದ್ರಾ ನದಿಗೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಚಿಂತನೆ ನಡೆಸಿರುವುದು ಅಂಭಿನಂದನೀಯ ಎಂದು ಹೇಳಿದರು.
ಶಾಸಕ ಅಮರೇಗೌಡ ಬಯ್ಯಾಪುರ, ಲಾಕ್ಡೌನ್ನಿಂದ ಆಗಿರುವ ಆರ್ಥಿಕ ಸಂಕಷ್ಟದ ನಡುವೆಯೂಸರ್ಕಾರ ಇಲ್ಲಿಯ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ನಿಗಮದ ಮುಖ್ಯ ಎಂಜಿನಿಯರ್ ರಂಗರಾಮ್ ಯೋಜನೆಯ ರೂಪುರೇಶೆ ವಿವರಿಸಿದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು.