ಗಂಗಾವತಿ: ಏಡ್ಸ್ ಅನ್ನೋದು ಮಾರಕ ರೋಗ.ಇದಕ್ಕೆ ಯಾವುದೇ ಔಷಧಿಯನ್ನು ಇದುವರೆಗೂ ಕಂಡುಹಿಡಿಯಲು ಆಗಿಲ್ಲ. ಕೇವಲ ಅದನ್ನು ನಿಯಂತ್ರಣ ಮಾಡಬಹುದು ಅಷ್ಟೇ, ಹಾಗಾಗಿ ಪ್ರತಿಯೊಬ್ಬರಿಗೂ ಈ ರೋಗದ ಬಗ್ಗೆ ಜಾಗ್ರತೆ ಇರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಟಿ.ಲಿಂಗರಾಜು ಹೇಳಿದರು.
ನಗರದ ಐಎಂಎ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನ-2020 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಏಡ್ಸ್ ಅನ್ನುವುದು ಮಾರಕ ರೋಗ. ಇದಕ್ಕೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ. ಆದರೆ, ವಿಜ್ಞಾನದ ಆವಿಷ್ಕಾರ ಎಷ್ಟಿದೆ ಅಂದರೇ, ನಮ್ಮ ಜಿಲ್ಲೆಯ ಎಆರ್ ಟಿ ಕೇಂದ್ರದಲ್ಲಿ ಏಡ್ಸ್ ರೋಗಿಗಳಿಗೆ ಕೊಡುವ ಚಿಕಿತ್ಸೆಯಿಂದ ಎರಡು ದಶಕಗಳ ಕಾಲ ಆರೋಗ್ಯಕರ ಜೀವನವನ್ನು ಸಾಗಿಸುವಂತದ್ದನ್ನು ನೀವು ನೋಡಿದ್ದೀರಿ. ಈ ಬಾರಿಯ ಘೋಷವಾಕ್ಯ ಜಾಗತಿಕ ಐಕ್ಯತೆ ಮತ್ತು ಜವಾಬ್ದಾರಿ. ಅಂದರೆ, ಇಡೀ ಪ್ರಪಂಚವೇ ಒಂದಾಗಿ ಈ ರೋಗದ ವಿರುದ್ಧ ಹೋರಾಟ ಮಾಡಬೇಕಿದೆ. ಮತ್ತು ಇದರ ಜವಾಬ್ದಾರಿಯನ್ನು ಎಲ್ಲರೂ ತೆಗೆದುಕೊಳ್ಳಬೇಕು ಎಂದರು.
ಜತೆಗೆ ಈ ಬಾರಿ ಖುಷಿಯ ವಿಚಾರ ಕೊಪ್ಪಳ ಜಿಲ್ಲಾ ಏಡ್ಸ್ ಘಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಸಿಕ್ಕಿದೆ. ಆ ನಿಟ್ಟಿನಲ್ಲಿ ನಮ್ಮ ಜಿಲ್ಲಾ ಏಡ್ಸ್ ಘಟಕದಲ್ಲಿ ಕೆಲಸ ಮಾಡುವಂತ ಎಲ್ಲಾ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಿದರು.
ನಂತರ ಆರೋಗ್ಯ ಇಲಾಖೆಯ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಿಬ್ಬಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
ಇದಕ್ಕೂ ಮುನ್ನ ಬೆಳಗ್ಗೆ ಏಳು ಗಂಟೆಗೆ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾಗೆ ಹಿರಿಯ ಸಿವಿಲ್ ನ್ಯಾಯಾಧೀಶೆ ಅನಿತಾ ಜಿ ಅವರು ಚಾಲನೆ ನೀಡಿದರು. ನಗರದ ಪ್ರಮುಖ ವೃತ್ತಗಳಲ್ಲಿ ನಡಿಗೆ ಮೂಲಕ ಸಂಚರಿಸಿ ಆರೋಗ್ಯ ಸಿಬ್ಬಂದಿ ಏಡ್ಸ್ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಇರ್ಫಾನ್ ಅಂಜುಮ್, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗೌರಿಶಂಕರ, ಡಿವೈಎಸ್ಟಿ ರುದ್ರೇಶ್ ಉಜ್ಜನಕೊಪ್ಪ, ವೈದ್ಯರಾದ ಡಾ.ಸತೀಶ್ ರಾಯ್ಕರ್, ಡಾ.ಅನಂತರಜ ಗೂಗಿ ಸೇರಿದಂತೆ ಆರೋಗ್ಯ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.