ಕೆರಗೋಡು: ಗ್ರಾಮಗಳ ಯುವಕರು ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲು ತೋರಿಸುವ ಒಲವನ್ನು ಗ್ರಾಮದ ಅಭಿವೃದ್ಧಿಗೂ ಒತ್ತು ನೀಡಬೇಕು. ಆಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ವೈದ್ಯಕೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ರವೀಂದ್ರ ಅಭಿಪ್ರಾಯಪಟ್ಟರು.
ಮಂಡ್ಯ ತಾಲ್ಲೂಕಿನ ಬಿ.ಹೊಸೂರು ಕಾಲೊನಿಯಲ್ಲಿ ಎಚ್.ಮಲ್ಲಿಗೆರೆ ಗ್ರಾಮಸ್ಥರು ಬೀರೇಶ್ವರ ದೇವಸ್ಥಾನದ ಉದ್ಘಾಟನೆ, ಹಿರಿಯಮ್ಮ ಮತ್ತು ಏಳೂರಮ್ಮ ದೇವರ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ವಿವಿಧ ಭಾಗಗಳಿಂದ ಸುಮಾರು 40 ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿದ್ದವು.
ಕಾರ್ಯಕ್ರಮದಲ್ಲಿ ರಶ್ಮಿ ಶಿವಕುಮಾರ್, ಶಂಭೂನಹಳ್ಳಿ ಕುಮಾರ್, ಚಂದ್ರಶೇಖರ್, ಉದ್ಯಮಿ ಮಂಡ್ಯ ರಮೇಶ್, ಮೇಲುಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್, ಜ್ಞಾನಪ್ಪ, ಅರುಣ್, ಮಹೇಶ್, ಎಂ.ಸಿ.ರಾಜು, ತಮ್ಮಣ್ಣ, ನಾಗರಾಜು, ಮಾಯಿಗೌಡ, ನಾಗರಾಜು ಇದ್ದರು.
ಆಯೋಜಕರು ಸ್ಪರ್ಧೆ ನಡೆಸಲು ಎಸ್ಪಿ, ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆದು ಸಿದ್ಧತೆ ಮಾಡಿಕೊಂಡಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಜೋಡೆತ್ತುಗಳ ಮಾಲೀಕರು ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದರು.
ಸ್ವಯಂಸೇವಾ ಸಂಘದವರು ಎತ್ತಿನಗಾಡಿ ಸ್ಪರ್ಧೆಯಲ್ಲಿ ಪ್ರಾಣಿ ಹಿಂಸೆ ನಡೆಸುತ್ತಿದ್ದು, ಸ್ಪರ್ಧೆಯನ್ನು ರದ್ದುಪಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಡಿದ್ದರು. ಈ ನಿಟ್ಟಿನಲ್ಲಿ ಮಂಡ್ಯ ತಶೀಸೀಲ್ದಾರ್ ಚಂದ್ರಶೇಖರ್ ಶಂ.ಗಾಳಿ ಹಾಗೂ ಕೆರಗೋಡು ಪೊಲೀಸರು ಸ್ಥಳಕ್ಕೆ ತೆರಳಿ ಕೋವಿಡ್ ನಿಯಮಾವಳಿ ಪಾಲನೆ, ಪ್ರಾಣಿಗಳಿಗೆ ಹಿಂಸೆ ಮಾಡಬಾರದು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಸೌಹಾರ್ದಯುತವಾಗಿ ನಡೆಸುವಂತೆ ಆಯೋಜಕರಿಗೆ ಸೂಚನೆ ನೀಡಿದರು.
ಆಯೋಜಕರು, ಗ್ರಾಮದ ಹಿರಿಯರು ತಹಶೀಲ್ದಾರ್ ಸೂಚನೆ ಪಾಲಿಸುವ ಭರವಸೆ ನೀಡಿದರು.