ಪಾಂಡವಪುರ (ಮಂಡ್ಯ): ತಾಲ್ಲೂಕಿನ ಬನಘಟ್ಟ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆಗೆಭಾನುವಾರ ರಾತ್ರಿ ಕಾರು ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ನಾಗಮಂಗಲ ತಾಲ್ಲೂಕಿನ ಅಲ್ಪಹಳ್ಳಿ ಗ್ರಾಮದ ನಿವಾಸಿ ಧರಣೇಂದ್ರ (35) ಮೃತಪಟ್ಟವರು.
ಅದೇ ಗ್ರಾಮದ ಕಾರು ಚಾಲಕ ಹಾಳೇಗೌಡ, ದಿಲೀಪ್, ವಿಜಯಕುಮಾರ್ ಹಾಗೂ ನವೀನ್ ಕುಮಾರ್ ಅವರನ್ನು ಸ್ಥಳೀಯರು ರಕ್ಷಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧರಣೇಂದ್ರ ಮತ್ತು ಅವರ ಸ್ನೇಹಿತರು ಅಲ್ಪಹಳ್ಳಿ ಗ್ರಾಮದಿಂದ ಆಯುಧಪೂಜೆ ಹಬ್ಬಕ್ಕಾಗಿ ಮೈಸೂರಿನ ಸಂಬಂಧಿಕರ ಮನೆಗೆ ಹೋಗಿದ್ದರು. ರಾತ್ರಿ ಊಟ ಮುಗಿಸಿಕೊಂಡು ಕಾರಿನಲ್ಲಿ ವಾಪಸ್ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬನಘಟ್ಟದ ವಿಶ್ವೇಶ್ವರಯ್ಯ ನಾಲೆಗೆ ಉರುಳಿದೆ. ಕಾರಿನ ಹಿಂಭಾಗದ ಸೀಟ್ನಲ್ಲಿ ಕುಳಿತಿದ್ದ ಧರಣೇಂದ್ರ ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಾಲೆಯಲ್ಲಿ ಬಿದ್ದಿದ್ದ ಕಾರನ್ನು ಸೋಮವಾರ ಬೆಳಿಗ್ಗೆ ಕ್ರೇನ್ ಮೂಲಕ ಹೊರ ತೆಗೆಯಲಾಗಿದೆ.