ಮಳವಳ್ಳಿ: ಟಿಎಪಿಸಿಎಂಎಸ್ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರದಿಂದ ಸೋಲಾಗಿದೆಯೇ ಹೊರತು ನಮ್ಮ ಪಕ್ಷದ ಸೋಲಲ್ಲ ಎಂದು ತಾಲ್ಲೂಕು ಪಂಚಾಯಿತಿ ವಿರೋಧ ಪಕ್ಷದ ಸೋಮಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಟಿಎಪಿಸಿಎಂಎಸ್ ಚುನಾವಣೆಯ ಹಿಂದಿನ ದಿನ ಪಕ್ಷದ ಅಭ್ಯರ್ಥಿ ತಳಗವಾದಿಯ ಹನುಮಂತು ಅವರನ್ನು ಕಾಂಗ್ರೆಸ್ ಪಕ್ಷದವರು ಹೈಜಾಕ್ ಮಾಡಿ ಕರೆದುಕೊಂಡು ಹೋಗಿ ಗೆದ್ದಿದ್ದಾರೆ. ಹನುಮಂತು ಅವರಿಗೆ ಚುನಾವಣೆಯಲ್ಲಿ ಸ್ಪರ್ಧೆ ಸಂಬಂಧ ಹಲವಾರು ಸಭೆ ಮಾಡಿ ಆಹ್ವಾನ ನೀಡಲಾಗಿತು. ಅವರ ದ್ವಂದ್ವ ನಿಲುವುನಿಂದ ನಮಗೆ ಸೋಲಾಗಿದ್ದು, ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಚುನಾವಣೆಯಲ್ಲಿ ಗೆದ್ದು ಜೆಡಿಎಸ್ ನ ಶಕ್ತಿ ತೋರಿಸಲಾಗುವುದು ಎಂದರು.
ತಾ.ಪಂ.ಅಧ್ಯಕ್ಷರ ಚುನಾವಣೆಯಲ್ಲಿ ನಮ್ಮ ಪಕ್ಷದ ಸದಸ್ಯೆಯೊಬ್ಬರು ನಮಗೆ ಮೋಸ ಮಾಡಿದ್ದಾರೆ. ಅವರಿಗೆ ಮತದಾರರ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ತಳಗವಾದಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಷದ ವಿಚಾರದಲ್ಲಿ ಸ್ವಲ್ಪ ಗೊಂದಲವಿದ್ದು, ಆ ಭಾಗದಲ್ಲಿ ನಮ್ಮ ಪಕ್ಷ ಸಾಕಷ್ಟು ಪ್ರಬಲವಾಗಿದೆ. ಮುಂದಿನ ದಿನಗಳಲ್ಲಿ ಅಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.
ತಾ.ಪಂ. ಸದಸ್ಯರಾದ ಪುಟ್ಟಸ್ವಾಮಿ, ಮುತ್ತುರಾಜ್, ತಾಲ್ಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಚಂದಹಳ್ಳಿ ಶ್ರೀಧರ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಹಿಂದುಳಿದ ವರ್ಗಗಳ ಅಧ್ಯಕ್ಷ ಸಿದ್ದಾಚಾರಿ ಇದ್ದರು.