ಮಂಡ್ಯ: ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ 2ನೇ ಹಂತದ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಫೀಕರ್ ಉಲ್ಲಾ, ತಹಶೀಲ್ದಾರ್ ಚಂದ್ರಶೇಖರ್ ಶಂ.ಗಾಳಿ ಕೋವಿಶೀಲ್ಡ್ ಲಸಿಕೆ ಪಡೆದರು.
ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಅವರೇ ಲಸಿಕೆ ಪಡೆಯುವ ಮೂಲಕ ಸಿಬ್ಬಂದಿಯಲ್ಲಿದ್ದ ಆತಂಕ ದೂರ ಮಾಡಿದರು. ಕಂದಾಯ, ಪೊಲೀಸ್, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆ (ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ) ಸಿಬ್ಬಂದಿ ಲಸಿಕೆ ಪಡೆಯಲಿಲ್ಲ. ಮೊದಲ ದಿನದಲ್ಲಿ 1,689 ಮಂದಿ ಲಸಿಕೆ ಪಡೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 322 ಮಂದಿ ಮಾತ್ರ (ಶೇ 19) ಲಸಿಕೆ ಪಡೆದಿದ್ದಾರೆ.
ದೂರಾಗದ ಆತಂಕ: ಕೋವಿಶೀಲ್ಡ್ ಲಸಿಕೆ ಪಡೆದರೆ ಅಡ್ಡ ಪರಿಣಾಮ ಆಗಬಹುದು ಎಂಬ ಕಾರಣಕ್ಕೆ ಹಲವು ಮಂದಿ ಲಸಿಕೆ ಪಡೆಯದಿರುವುದು ಆರೋಗ್ಯ ಇಲಾಖೆಯ ಅಂಕಿ ಅಂಶದಿಂದ ತಿಳಿದು ಬರುತ್ತದೆ. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ 15,316 ಸಿಬ್ಬಂದಿಯಲ್ಲಿ ಇಲ್ಲಿಯವರೆಗೆ 1,0603 ಮಂದಿ ಮಾತ್ರ ಲಸಿಕೆ ಪಡೆದಿದ್ದು, ಶೇ 69.22 ಗುರಿ ತಲುಪಲಾಗಿದೆ. ಇನ್ನೂ 5 ಸಾವಿರ ಸಿಬ್ಬಂದಿ ಪಡೆಯಬೇಕಿದೆ.
ಫ್ರಂಟ್ಲೈನ್ ಸಿಬ್ಬಂದಿಗೆ ಮೂರು ದಿನಗಳ ಕಾಲ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕಂದಾಯ, ಪೊಲೀಸ್, ಜಿ.ಪಂ, ಗ್ರಾಪಂ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಯ 8,005 ಮಂದಿ ಲಸಿಕೆ ಪಡೆಯಲು ನೋಂದಣಿ ಮಾಡಿಸಿಕೊಂಡಿದ್ದಾರೆ.
‘ಮಂಗಳವಾರ 4,800 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಮಿಮ್ಸ್, 6 ತಾಲ್ಲೂಕು ಆಸ್ಪತ್ರೆ, 10 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಈಗಾಗಲೇ 15 ಸಾವಿರ ಡೋಸೇಜ್ ಡಿಎಚ್ಒ ಕಚೇರಿಗೆ ಬಂದಿದೆ. ಯಾವುದೇ ಅಂಜಿಕೆ ಇಲ್ಲದೆ ಬಂದು ಲಸಿಕೆ ಪಡೆಯಬಹುದು. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಲಸಿಕೆ ಪಡೆಯಲು ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ತಿಳಿಸಿದರು.
‘ಈಗಾಗಲೇ ಮೊದಲ ಹಂತದಲ್ಲಿ ಲಸಿಕೆ ಪಡೆದವರ 28 ದಿನಗಳ ಅವಧಿ ಫೆ. 13ಕ್ಕೆ ಮುಗಿಯಲಿದ್ದು, ಅಂದಿನಿಂದ 2ನೇ ಡೋಸ್ ನೀಡಲಾಗುವುದು. ಲಸಿಕೆ ಪಡೆದ ಬೆರಳೆಣಿಕೆ ಮಂದಿಯಲ್ಲಿ ಮಾತ್ರ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬಂದಿದ್ದು, ಸರಿಹೋಗುತ್ತಿದೆ. ಯಾವುದೇ ಸಮಸ್ಯೆ ಇಲ್ಲ’ ಎಂದು ಹೇಳಿದರು.
ಲಸಿಕೆ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ‘ನನಗೆ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ. ಪುಣೆಯ ಸೀರಂ ಇನ್ಸ್ಟಿಟ್ಯೂಟ್ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಫ್ರಂಟ್ ಲೈನ್ ವಾರಿಯರ್ ಆಗಿ ಪಡೆದಿದ್ದೇನೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ’ ಎಂದರು.
‘ಜಿಲ್ಲೆಗೆ ಸಾವಿರಾರು ಡೋಸ್ಗಳು ಬಂದಿದ್ದು ವೈದ್ಯರ ಸಲಹೆಯಂತೆ 30 ನಿಮಿಷ ವೀಕ್ಷಣೆಯಲ್ಲಿದ್ದೇನೆ. ಲಸಿಕೆ ಪಡೆಯಲು ನಿರ್ದೇಶನ ಇರುವವರು ಯಾವುದೇ ಆತಂಕ ಇಲ್ಲದೆ ಪಡೆಯಬಹದು. ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಜಯಶೀಲರಾಗುತ್ತೇವೆ’ ಎಂದರು.
ಮಿಮ್ಸ್ ಪ್ರಭಾರ ನಿರ್ದೇಶಕ ಡಾ.ಎಂ.ಆರ್.ಹರೀಶ್, ಡಿಎಚ್ಒ ಮಂಚೇಗೌಡ, ಆರ್ಸಿಎಚ್ ಅಧಿಕಾರಿ ಡಾ.ಸೋಮಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.