ಮಂಡ್ಯ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಸುಮಲತಾ ಅವರು ಕೆ ಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವ ವಿಡಿಯೊ ಹಾಗೂ ಚಿತ್ರಗಳನ್ನು ಹಂಚಿಕೊಂಡು ಅಶ್ಲೀಲವಾಗಿ ಸಂದೇಶ ಪ್ರಕಟಿಸಿದ್ದ ಐವರು ಫೇಸ್ಬುಕ್ ಬಳಕೆದಾರರ ವಿರುದ್ಧ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್ ಶನಿವಾರ ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.
ಎಚ್.ಜಿ.ಹರೀಶ್, ಸುರೇಂದ್ರ ಶ್ರೀನಿವಾಸಗೌಡ, ಕರ್ನಾಟಕ ಜೆಡಿಎಸ್ ಖಾತೆ ಬಳಕೆದಾರ, ಆರ್.ಇ.ಸಹೀದ್, ಫ್ರೈಡ್ ಆಫ್ ಯು.ಕೆ.ಖಾತೆ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶುಕ್ರವಾರ ಗೌರಿ ಹಬ್ಬದ ದಿನ ಸುಮಲತಾ ಸೇರಿ ಹಲವು ಮುಖಂಡರು ಮುಖ್ಯಮಂತ್ರಿಗಳ ಜೊತೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದರು.ಕೆಲ ಕಿಡಿಗೇಡಿಗಳು ಪೂಜೆ ಸಲ್ಲಿಸುವ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅವಹೇಳನಾಕಾರಿಯಾಗಿ ಸಂದೇಶ ಹಾಕಿದ್ದರು.
'ಅಶ್ಲೀಲವಾಗಿ ಸಂದೇಶ ಪ್ರಕಟಿಸಿದ ಫೇಸ್ಬುಕ್ ಬಳಕೆದಾರರನ್ನು ಶೀಘ್ರ ಬಂಧಿಸಲಾಗುವುದು. ಸಂದೇಶ ಹಂಚಿಕೊಂಡವರಿಗೂ ನೋಟಿಸ್ ನೀಡಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿದರು.