ಕೆ.ಆರ್.ಪೇಟೆ: ‘ತಾಲ್ಲೂಕಿನ ಸಹಕಾರ ಸಂಸ್ಥೆಯಾದ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಅವರು ಕೊಟ್ಟ ಮಾತಿನಂತೆ ಅಧಿಕಾರ ಬಿಟ್ಟುಕೊಡಬೇಕು’ ಎಂದು ರಾಜ್ಯ ಮಾರಾಟ ಮಹಾಮಂಡಳಿಯ ನಿರ್ದೇಶಕ ಶೀಳನೆರೆ ಮೋಹನ್ ಒತ್ತಾಯಿಸಿದ್ದಾರೆ.
‘ಪಕ್ಷದ ಹಿರಿಯ ನಾಯಕರಾಗಿದ್ದ ಬಿ.ಎಲ್.ದೇವರಾಜು ಕಳೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲದಿಂದ ಗೆದ್ದು ಅಧ್ಯಕ್ಷರಾಗಿದ್ದರು. ಅಧ್ಯಕ್ಷರಾಗುವಾಗ ಮೊದಲ ಒಂದು ಅವಧಿಗೆ ಒಡಂಬಡಿಕೆಯಂತೆ ಅಧ್ಯಕ್ಷರಾಗಿದ್ದು, ಈಗ ಅವರ ಅವಧಿ ಮುಗಿದಿದೆ. ಒಪ್ಪಂದದಂತೆ ಅವರು ರಾಜೀನಾಮೆ ನೀಡಬೇಕಿತ್ತು’ ಎಂದು ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಜೆಡಿಎಸ್ ಪಕ್ಷ ತೊರೆದು ಕಳೆದ ವಿದಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೂ ನಾವು ಮುಂದೆ ಒಪ್ಪಂದದಂತೆ ರಾಜೀನಾಮೆ ನೀಡುತ್ತಾರೆಂದು ಭಾವಿಸಿ ಸುಮ್ಮನಿದ್ದೆವು. ಆದರೆ ಈವರೆಗೂ ಅವರು ರಾಜೀನಾಮೆ ನೀಡಿಲ್ಲ, ರಾಜೀನಾಮೆ ಪ್ರಸ್ತಾಪ ಮಾಡಿದರೆ ಅವಿಶ್ವಾಸ ಮಂಡಿಸಿ ಕೆಳಗಿಳಿಸಿ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಮಾತು ದೇವರಾಜು ಅವರಂತಹ ಹಿರಿಯ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ. ಸಹಕಾರ ಕ್ಷೇತ್ರದಲ್ಲಿ ದ್ವೇಷ ರಾಜಕಾರಣಕ್ಕೆ ಆದ್ಯತೆ ನೀಡದೆ ಕೊಟ್ಟ ಮಾತಿನಂತೆ ಅವರು ರಾಜೀನಾಮೆ ನೀಡಬೇಕು. ಸಹಕಾರ ಕ್ಷೇತ್ರದ ಬೆಳವಣಿಗೆಗೆ ನೆರವಾಗಬೇಕು’ ಎಂದು ಆಗ್ರಹಿಸಿದ್ದಾರೆ.
ಜೆಡಿಎಸ್ ಘಟಕದ ತಾಲ್ಲೂಕು ಅಧ್ಯಕ್ಷ ಎ.ಎನ್ ಜಾನಕೀರಾಂ, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್, ಟಿಎಪಿಸಿಎಂಎಸ್ ನಿರ್ದೇಶಕರಾದ ನಾಗರಾಜು, ಮಂಜುನಾಥ್, ತೆರ್ನೇನಹಳ್ಳಿ ಬಲದೇವ್, ಸುಕನ್ಯಾ ಲಕ್ಷ್ಮಣ್, ರುಕ್ಮಿಣಿ, ರಾಮಕೃಷ್ಣೇಗೌಡ, ಎಸ್.ಜಿ ಮೋಹನ್, ದಿನೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.