ಮಂಡ್ಯ: ತಾಲ್ಲೂಕಿನ ಬಿ.ಹೊಸೂರು ಗ್ರಾಮದ ರೈತ ಎಚ್.ಸಿದ್ದಯ್ಯ ಅವರಿಗೆ ಸೇರಿದ ಕಬ್ಬಿನ ಗದ್ದೆಗೆ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ತಗುಲಿ ಎರಡು ಎಕರೆಗೂ ಹೆಚ್ಚು ಬೆಳೆ ಭಸ್ಮವಾಗಿರುವ ಘಟನೆ ಗುರುವಾರ ನಡೆದಿದೆ.
ಸಾಲ ಮಾಡಿ ತಮ್ಮ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು, ಈಗಾಗಲೇ ಕಟಾವಿಗೆ ಬಂದಿತ್ತು. ಕಬ್ಬು ಕಟಾವು ಮಾಡುವ ಕೆಲಸಗಾರರಿಗೆ ಮುಂಗಡ ಹಣ ನೀಡಲಾಗಿತ್ತು. ನಾಗಮಂಗಲ ಮುಖ್ಯ ವಿದ್ಯುತ್ ಘಟಕಕ್ಕೆ ಸಂಪರ್ಕಿಸುವ ವಿದ್ಯುತ್ ತಂತಿ ಈ ಭಾಗದಲ್ಲಿ ಹಾದು ಹೋಗಿದ್ದು ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಹೋಗಿದ್ದು ರೈತ ಕಂಗಾಲಾಗಿದ್ಧಾರೆ. ಸುಟ್ಟು ಹೋದ ಕಬ್ಬಿನ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಿದ್ದಯ್ಯ ಅವರ ಮಕ್ಕಳಾದ ನಾಗರಾಜು ಮತ್ತು ಶಿವಸ್ವಾಮಿ ಅವರು ಮನವಿ ಮಾಡಿದ್ದಾರೆ.