ಮಂಡ್ಯ: ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಮಂಗಳವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.
ಮೃತರಾಗಿರುವ ನಾಲ್ವರೂ ಮಂಡ್ಯ ತಾಲ್ಲೂಕಿಗೆ ಸೇರಿದ್ದಾರೆ. 42 ವರ್ಷದ ವ್ಯಕ್ತಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. 65 ವರ್ಷದ ಮಹಿಳೆ ಮಧುಮೇಹ ತೀವ್ರಗೊಂಡಿತ್ತು. 75 ವರ್ಷ ವಯಸ್ಸಿನ ವ್ಯಕ್ತಿ, 55 ವರ್ಷದ ಮಹಿಳೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ವೆಂಟಿಲೇಟ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಮಂಗಳವಾರ 186 ಮಂದಿಗೆ ಕೋವಿಡ್–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,047ಕ್ಕೆ ಹೆಚ್ಚಾಗಿದೆ. ಮಂಡ್ಯ ತಾಲ್ಲೂಕಿನ 71 ಮಂದಿ, ಶ್ರೀರಂಗಪಟ್ಟಣ 35, ಕೆ.ಆರ್.ಪೇಟೆ 22, ಪಾಂಡವಪುರ 19, ನಾಗಮಂಗಲ 14, ಮಳವಳ್ಳಿ 12, ಮದ್ದೂರು ತಾಲ್ಲೂಕಿನ 9 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಕೋವಿಡ್ನಿಂದ ಗುಣಮುಖರಾದ 410 ಮಂದಿಯನ್ನು ವಿವಿಧ ಕೋವಿಡ್ ಕೇರ್ ಕೇಂದ್ರಗಳಿಂದ ಬಿಡುಗಡೆ ಮಾಡಲಾಯಿತು. ಮಂಡ್ಯ ತಾಲ್ಲೂಕಿನ 201 ಮಂದಿ, ಕೆ.ಆರ್.ಪೇಟೆ 115, ಪಾಂಡವಪುರ, ನಾಗಮಂಗಲ ತಲಾ 35, ಶ್ರೀರಂಗಪಟ್ಟಣ ತಾಲ್ಲೂಕಿನ 15 ಮಂದಿಯನ್ನು ಬಿಡುಗಡೆ ಮಾಡಲಾಯಿತು.
ಒಟ್ಟು ರೋಗಿಗಳಲ್ಲಿ ಇಲ್ಲಿಯವರೆಗೆ 5,065 ಮಂದಿ ಗುಣಮುಖರಾಗಿದ್ದಾರೆ. 1,905 ಪ್ರಕರಣಗಳು ಸಕ್ರಿಯವಾಗಿವೆ.