ಕೆ.ಆರ್.ಪೇಟೆ: ಕಾರ್ತಿಕ ಮಾಸದ ಅಂಗವಾಗಿ ಪಟ್ಟಣದ ಶ್ರವಣಬೆಳಗೊಳ ರಸ್ತೆಯಲ್ಲಿ ಇರುವ ಈಶ್ವರ ದೇವಾಲಯದಲ್ಲಿ ಸೋಮವಾರ ಗಿರಿಜಾ ಕಲ್ಯಾಣ ಮಹೋತ್ಸವ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ನಡೆಯಿತು.
ಮುಜರಾಯಿ ಇಲಾಖೆ, ಬ್ರಾಹಣ ಸಮಾಜ ಮತ್ತು ಭ್ರಮರಾಂಬಾ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಯಿಂದ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಗಿರಿಜಾ ಕಲ್ಯಾಣ ಮಹೋತ್ಸವದ ಅಂಗವಾಗಿ ದೇವಾಲಯದ ಆರಾಧ್ಯ ದೈವ ಭ್ರಮರಾಂಬಿಕಾ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಾನದಲ್ಲಿ ಬುಧವಾರದಿಂದ ವಿವಿಧ ಹೋಮ ಪೂಜಾ ಕಾರ್ಯಗಳು ನಡೆದವು.
ಭಾನುವಾರ ಸಂಜೆ ವಿವಾಹ ಮಹೋತ್ಸವವದ ಅಂಗವಾಗಿ ಮೆರವಣಿಗೆಯಲ್ಲಿ ಬಿಜಯಂಗೈದವರ ಮಲ್ಲಿಕಾರ್ಜುನ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ದುರ್ಗಾಭವನ್ ವೃತ್ತದಲ್ಲಿ ಅಗ್ರಹಾರದ ಭಕ್ತರು ಮತ್ತು ಪಟ್ಟಣದ ಸಾರ್ವಜನಿಕರು ಬರಮಾಡಿಕೊಂಡರು.
ಸೋಮವಾರ ಬೆಳಿಗ್ಗೆ ವಿವಾಹ ಮಹೋತ್ಸವದ ಅಂಗವಾಗಿ ಕಂಕಣಧಾರಣೆ, ಮಾಂಗಲ್ಯಧಾರಣೆ, ಕಾಶಿಯಾತ್ರೆ ನಡೆದವು. ಧಾರ್ಮಿಕ ಚಿಂತಕ ಗೋಪಾಲಕೃಷ್ಣ ಅವದಾನಿ ಅವರ ನೇತೃತ್ವದಲ್ಲಿ ಪುರೋಹಿತರಾದ ರೋಹಿತ್ ಶರ್ಮ, ಮಾಲತೇಶ್ ಭಟ್ಟ ಧಾರ್ಮಿಕ ಕೈಂಕರ್ಯ ನಡೆಸಿಕೊಟ್ಟರು.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಿವಾಹ ಅಪೇಕ್ಷೆ ಉಳ್ಳ ಯುವಕ– ಯುವತಿಯರು ದೇವರಿಗೆ ಸೀರೆ, ಕುಪ್ಪಸ, ಪಂಚೆ ಅರ್ಪಿಸಿ, ಕಂಕಣ ಸಹಿತ ಸ್ವೀಕರಿಸಿದರು. ಸಂಜೆ ರಾಜಬೀದಿಯಲ್ಲಿ ದೇವರ ಮೆರವಣಿಗೆ, ಉಯ್ಯಾಲೋತ್ಸವಗಳು ನಡೆದವು.
ನಂತರ ಭಕ್ತಿ ಸಮರ್ಪಣೆಯ ಅಂಗವಾಗಿ ಬೆಂಗಳೂರಿನ ಎಂ.ಎಸ್.ಶೃತಿ ಗೋಕುಲ್ ಅವರಿಂದ ಭರತನಾಟ್ಯ ನೃತ್ಯ ಪ್ರದರ್ಶನ, ವೀಣೆ ಮತ್ತು ಪಿಟೀಲು ಜಂಟಿ ವಾದ್ಯಗೋಷ್ಠಿ ವಿದುಷಿ ಎಸ್.ವಿ.ಸಹನಾ ಮತ್ತು ವಿದ್ವಾನ್ ಶ್ರೀನಿವಾಸ್ ಅವರಿಂದ ನಡೆಯಿತು.
ಈ ಸಮಾರಂಭದಲ್ಲಿ ಭಾಗಹಿಸಿದ್ದ ಶಾಸಕ ಎಚ್.ಟಿ.ಮಂಜು ದಂಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಇಂತಹ ಧಾರ್ಮಿಕ ಸಮಾರಂಭ, ಉತ್ಸವ ಮತ್ತು ಮಹೋತ್ಸವಗಳು ನಡೆಯುತ್ತಿರುವದು ಒಳ್ಳೆಯ ಬೆಳವಣಿಗೆಯಾಗಿದೆ. ಸಾವಿರಾರು ಮಂದಿ ಭಾಗವಹಿಸಿ ಸರ್ವರ ಹಿತ ಕ್ಕಾಗಿ ಪ್ರಾರ್ಥಿಸುತ್ತಿರುವದು ನಮ್ಮ ಹಿರಿಯರು ಕೊಟ್ಟ ಬಳುವಳಿಯಾಗಿದೆ. ತಾಲ್ಲೂಕಿನ ಸಮಸ್ತ ಜನರಿಗೂ ನೆಮ್ಮದಿ, ಶಾಂತಿಯುತ ಬದುಕು ನೀಡುವಂತೆ ಪ್ರಾರ್ಥಿಸಿದ್ದಾಗಿ’ ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರು, ವಿವಿಧ ಸಮಾಜದ ಮುಖಂಡರು, ಪುರಸಭೆಯ ಸದಸ್ಯರು, ರಾಜಕೀಯ ಗಣ್ಯರು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಇದ್ದರು.
ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ಕಲ್ಯಾಣಕ್ಕಾಗಿ ಯುವಕ– ಯುವತಿಯರಿಂದ ಹರಕೆ ಮನಸೆಳೆದ ಜಂಟಿ ವಾದ್ಯಗೋಷ್ಠಿ, ಭರತನಾಟ್ಯ ಪ್ರದರ್ಶನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.