ಮಂಡ್ಯ: ನಗರದ ವಿವಿಧ ಕಾಲೇಜುಗಳ ಕ್ರೀಡಾಪಟುಗಳು ನೇಪಾಳದ ಪೋಕ್ರಾದಲ್ಲಿ ಇಂಡಿಯನ್ ಅಮೆಚೂರ್ ಸ್ಪೋರ್ಟ್ಸ್ ಫೆಡರೇಷನ್ ಆಯೋಜಿಸಿದ್ದ ಹ್ಯಾಂಡ್ಬಾಲ್ ಟೂರ್ನಿಯಲ್ಲಿ ಚಿನ್ನದ ಪದಕ ಗಳಿಸಿದ ಸಾಧನೆ ಮಾಡಿದ್ದಾರೆ.
ಇಂಡೋ-ನೇಪಾಳ ಚಾಂಪಿಯನ್ಶಿಪ್ನಲ್ಲಿ ಪಿಇಎಸ್ ಸಂಸ್ಥೆಯ ಕಾಲೇಜುಗಳು, ಮಹಿಳಾ ಸರ್ಕಾರಿ ಕಾಲೇಜು, ಮಾಂಡವ್ಯ ಕಾಲೇಜು, ಸದ್ವಿದ್ಯಾ ಕಾಲೇಜು, ಅಭಿನವ ಭಾರತಿ ಕಾಲೇಜು, 22 ಸೆಂಚುರಿ ಮತ್ತು ಕಾರ್ಮೆಲ್ ಸಂಸ್ಥೆ ಸೇರಿದಂತೆ ಒಟ್ಟು 24 ಮಂದಿ ಕ್ರೀಡಾಪಟುಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.
ನೇಪಾಳ ತಂಡದ ವಿರುದ್ಧ ಮಂಡ್ಯದ ಬಾಲಕರು 24-11 ಅಂಕಗಳಿಂದ ಹಾಗೂ ಬಾಲಕಿಯರ ತಂಡ 7-3 ಅಂಕಗಳಿದ ಗೆಲುವು ಪಡೆದರು.
ಪಿಇಎಸ್ ಸಂಸ್ಥೆಯ ಕೋಚ್ ಟಿ.ಕೆ. ರವಿ ಅವರು 2005ರಲ್ಲಿ ಸಂಜೀವಿನಿ ಸ್ಪೋರ್ಟ್ಸ್ ಹ್ಯಾಂಡ್ ಬಾಲ್ ಕ್ಲಬ್ ಆರಂಭಿಸಿದ್ದರು. ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿ ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಅವರೇ ವಿದ್ಯಾರ್ಥಿಗಳನ್ನು ಟೂರ್ನಿಗೆ ಕರೆದೊಯ್ದಿದ್ದರು.
‘ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಪಿಇಎಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಅವಕಾಶ ನೀಡಿದ್ದರು. ಅದರಿಂದಾಗಿ ಮಂಡ್ಯದ ವಿದ್ಯಾರ್ಥಿಗಳು ನೇಪಾಳದಲ್ಲಿ ಗೆದ್ದು ಪ್ರಶಸ್ತಿ ತರಲು ಸಾಧ್ಯವಾಯಿತು’ ಎಂದು ಕೋಚ್ ರವಿ ತಿಳಿಸಿದ್ದಾರೆ.